ಭಾಲ್ಕಿ: ‘ಐಐಟಿಯಲ್ಲಿ ಉತ್ತಮವಾಗಿ ಅಭ್ಯಸಿಸಿ ರಾಷ್ಟ್ರದ ಪ್ರಗತಿಗೆ ಅನುಕೂಲ ವಾಗುವಂಥ ಸಂಶೋಧನೆಯನ್ನು ವಿದ್ಯಾರ್ಥಿಗಳು ಕೈಗೊಳ್ಳಬೇಕು. ಎಲ್ಲರ ಧ್ಯೇಯ ರಾಷ್ಟ್ರದ ಏಳಿಗೆಯೇ ಆಗಿರಬೇಕು’ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನಲ್ಲಿ ನಡೆದ ಐಐಟಿ ಸಾಧಕರ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಾಧನೆಗೆ ಬಡತನ, ಸಿರಿತನ ಎಂಬ ಭೇದವಿಲ್ಲ. ನಿರಂತರ ಪ್ರಯತ್ನ, ಅವಿರತ ಓದು, ಶಿಕ್ಷಕರ ಮಾರ್ಗದರ್ಶನದ ಪಾಲನೆ, ಸಮಯ ಪ್ರಜ್ಞೆ, ಪ್ರಬಲವಾದ ಇಚ್ಛೆ, ಆತ್ಮವಿಶ್ವಾಸ ಸಾಧನೆಯ ರಹಸ್ಯದ ಮಂತ್ರಗಳಾಗಿವೆ ಎಂದು ತಿಳಿಸಿದರು.
ಪ್ರಮುಖರಾದ ರೇಕು ನಾಯಕ್ ಮಾತನಾಡಿ,‘ಗುರುಕುಲ ಕಾಲೇಜು ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಲಿಗೆ ವರವಾಗಿದೆ. ಕಡಿಮೆ ಖರ್ಚಿನಲ್ಲಿ ಗುಣಾತ್ಮಕ, ಸಂಸ್ಕಾರಯುತ ಶಿಕ್ಷಣ ಲಭಿಸುತ್ತಿರುವುದು ವಿದ್ಯಾರ್ಥಿ, ಪಾಲಕರಿಗೆ ಸಂತಸವನ್ನುಂಟು ಮಾಡಿದೆ’ ಎಂದರು.
ಸಾಧಕ ವಿದ್ಯಾರ್ಥಿಗಳಿಗೆ ಮೈಸೂರು ಪೇಟ ತೋಡಿಸಿ ಸನ್ಮಾನಿಸಲಾಯಿತು.