ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

132 ಮಂದಿಗೆ ಔಷಧಿ ಕಿಟ್ ಉಚಿತ ವಿತರಣೆ

ಕ್ಷಯ ರೋಗಿಗಳಿಗೆ ನಾಗಮಾರಪಳ್ಳಿ ಫೌಂಡೇಷನ್ ನೆರವು
Last Updated 25 ಜನವರಿ 2023, 14:19 IST
ಅಕ್ಷರ ಗಾತ್ರ

ಬೀದರ್: ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್‍ನಿಂದ ದತ್ತು ಪಡೆಯಲಾದ 132 ಕ್ಷಯ ರೋಗಿಗಳಿಗೆ ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಯಲ್ಲಿ ಔಷಧಿ, ಆಹಾರ ಹಾಗೂ ಪೌಷ್ಟಿಕಾಂಶ ಕಿಟ್ ಉಚಿತವಾಗಿ ವಿತರಿಸಲಾಯಿತು.


ದೇಶವನ್ನು ಕ್ಷಯ ರೋಗ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಯಾನ ಆರಂಭಿಸಿದ್ದಾರೆ. ಅಭಿಯಾನಕ್ಕೆ ಕೈಜೋಡಿಸಲು ಫೌಂಡೇಷನ್‍ನಿಂದ ಕ್ಷಯ ರೋಗಿಗಳನ್ನು ಪಡೆಯಲಾಗಿದೆ ಎಂದು ಕಿಟ್ ವಿತರಿಸಿದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರೂ ಆದ ಫೌಂಡೇಷನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.


ದತ್ತು ಪಡೆಯಲಾದ ಕ್ಷಯ ರೋಗಿಗಳಿಗೆ ಫೌಂಡೇಷನ್‍ನಿಂದ ಆರು ತಿಂಗಳ ವರೆಗೆ ಮಾಸಿಕ ಔಷಧಿ, ಆಹಾರ ಹಾಗೂ ಪೌಷ್ಟಿಕಾಂಶ ಕಿಟ್ ವಿತರಿಸಲಾಗುವುದು. ಈಗಾಗಲೇ ರೋಗಿಗಳಿಗೆ ಎರಡು ತಿಂಗಳ ಕಿಟ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.


2025 ರ ವೇಳೆಗೆ ದೇಶವನ್ನು ಕ್ಷಯ ರೋಗಮುಕ್ತಗೊಳಿಸುವ ಪ್ರಧಾನಿ ಅವರ ಕನಸು ಸಾಕಾರಗೊಳಿಸಲು ಎಲ್ಲರೂ ಶ್ರಮಿಸಬೇಕು. ಜಿಲ್ಲೆಯನ್ನು ಕ್ಷಯ ರೋಗ ಮುಕ್ತಗೊಳಿಸಲು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಫೌಂಡೇಷನ್ ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಬಡವರು, ಮಹಿಳೆಯರು, ಅಸಹಾಯಕರು, ಸಂತ್ರಸ್ತರಿಗೆ ನೆರವಾಗುತ್ತ ಬಂದಿದೆ. ತನ್ನ ಸೇವಾ ಕಾರ್ಯವನ್ನು ಮುಂದುವರಿಸಲಿದೆ ಎಂದು ತಿಳಿಸಿದರು.


ಒಂದು ತಿಂಗಳ ಅವಧಿಯಲ್ಲಿ ನಮ್ಮ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಮಾನವೀಯ ನೆಲೆಯಲ್ಲಿ ಉಚಿತ ಔಷಧಿ, ಪೌಷ್ಟಿಕಾಂಶ ಹಾಗೂ ಆಹಾರದೊಂದಿಗೆ ಆರು ತಿಂಗಳ ವರೆಗೆ ಸಂಪೂರ್ಣ ಚಿಕಿತ್ಸೆಯ ಹೊಣೆ ಹೊತ್ತುಕೊಂಡಿರುವ ನಾಗಮಾರಪಳ್ಳಿ ಫೌಂಡೇಷನ್‍ಗೆ ಕೃತಜ್ಞರಾಗಿದ್ದೇವೆ ಎಂದು ಕಿಟ್ ಸ್ವೀಕರಿಸಿದ ಅನೇಕ ರೋಗಿಗಳು ಹೇಳಿದರು.
ಫೌಂಡೇಷನ್ ನಿರ್ದೇಶಕ ತರುಣ್ ಎಸ್. ನಾಗಮಾರಪಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ, ಡಾ. ಶರಣಯ್ಯ ಸ್ವಾಮಿ, ಡಾ. ಸಿದ್ಧಾರೆಡ್ಡಿ, ಡಾ. ಶಾಂತಲಿಂಗ ಪಾಟೀಲ, ಡಾ. ಸತೀಶ್ ಪಾಟೀಲ, ಡಾ. ಸೊಹೆಲ್, ಮುಖಂಡರಾದ ಫರ್ನಾಂಡೀಸ್ ಹಿಪ್ಪಳಗಾಂವ್, ಮಹೇಶ ಗೋರನಾಳಕರ್, ಅಲಿ ಸಾಬ್, ಸಾರಾ ಅಂಜುಮ್, ರೆಹಮಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT