ಜನವಾಡ: ದೇಶದ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ಯುವ ಮುಖಂಡ ಸಂತೋಷಕುಮಾರ ಘೋಡೆ ಹಾಗೂ ತಂಡದ ವತಿಯಿಂದ ಬೀದರ್ ತಾಲ್ಲೂಕಿನ ರಂಜೋಳಖೇಣಿ ಹಾಗೂ ಔರಾದ್(ಎಸ್)ನಲ್ಲಿ ನಡೆದ ಶಿಬಿರದಲ್ಲಿ 900 ಜನರ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.
ಡಾ.ಸಂದೀಪ್ ಘೋಡೆ, ಡಾ.ಆಕಾಶ, ಡಾ.ಸತೀಶ್, ಡಾ.ಸುಪ್ರೀತ್, ಡಾ.ಆನಂದ, ಸಂತೋಷ ಗೋಖಲೆ ಹಾಗೂ ಸಿಬ್ಬಂದಿಯಿಂದ ರಂಜೋಳಖೇಣಿಯಲ್ಲಿ 500 ಹಾಗೂ ಔರಾದ್(ಎಸ್)ನಲ್ಲಿ 400 ಜನರ ತಪಾಸಣೆ ನಡೆಸಿ, ಅವಶ್ಯಕತೆ ಇದ್ದವರಿಗೆ ಔಷಧಿ ಉಚಿತವಾಗಿ ಕೊಡಲಾಯಿತು.
80 ಜನರ ಕೋವಿಡ್ ರ್ಯಾಟ್ ಪರೀಕ್ಷೆ ಮಾಡಲಾಯಿತು. ಸಾರ್ವಜನಿಕರಿಗೆ ಸುಮಾರು ಒಂದು ಸಾವಿರ ಮಾಸ್ಕ್, ಯುವಕರಿಗೆ ಟೀ ಶರ್ಟ್ ಉಚಿತವಾಗಿ ವಿತರಿಸಲಾಯಿತು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮಾಜಿ ಕಾರ್ಯದರ್ಶಿ ರೋಹಿದಾಸ ಘೋಡೆ ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ಆರೋಗ್ಯ ರಕ್ಷಣೆ ಬಹಳ ಮುಖ್ಯವಾಗಿದೆ. ಹೀಗಾಗಿ ಜನರಿಗೆ ನೆರವಾಗಲು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ’ ಎಂದು ತಿಳಿಸಿದರು.
‘ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಏನನ್ನು ಬೇಕಾದರೂ ಸಾಧಿಸಬಹುದು. ಕಾರಣ, ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು. ಆರೋಗ್ಯ ಸಮಸ್ಯೆ ಕಂಡು ಬಂದರೆ ಕೂಡಲೇ ವೈದ್ಯರನ್ನು ಕಾಣಬೇಕು’ ಎಂದು ಸಲಹೆ ಮಾಡಿದರು.
‘ಸ್ವಾತಂತ್ರ್ಯದ 75ನೇ ವರ್ಷಾಚರಣೆ ನಿಮಿತ್ತ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಎರಡು ಗ್ರಾಮಗಳಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರಕ್ಕೆ ಭಾರಿ ಸ್ಪಂದನೆ ದೊರಕಿದೆ’ ಎಂದು ಯುವ ಮುಖಂಡ ಸಂತೋಷಕುಮಾರ ಘೋಡೆ ಹೇಳಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಅನಿಲಕುಮಾರ ಮಜಗೆ, ರಂಜೋಳಖೇಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭದ್ರಿನಾಥ ಖೇಣಿ, ಉಪಾಧ್ಯಕ್ಷ ಮನೋಜ್, ಸದಸ್ಯರಾದ ಅಶೋಕ, ಮಲ್ಲಪ್ಪ, ಮುಖಂಡ ಸೂರ್ಯಕಾಂತ ದಳಪತಿ ಇದ್ದರು.