ಬಸವಕಲ್ಯಾಣ: ನಗರದ ಚೌಧರಿ ಆಸ್ಪತ್ರೆಯಲ್ಲಿನ ಸಿಟಿಸ್ಕ್ಯಾನ್ ಕೇಂದ್ರಕ್ಕೆ ಶಾಸಕ ಶರಣು ಸಲಗರ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರ ನಿಗದಿಪಡಿಸಿದ ದರ ಮಾತ್ರ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯವರಿಗೆ ಸೂಚಿಸಿದರು.
‘ಬಿಪಿಎಲ್ ಪಡಿತರ ಚೀಟಿದಾರರಿಗೆ ₹1,500 ಹಾಗೂ ಎಪಿಎಲ್ ಪಡಿತರ ಚೀಟಿದಾರರಿಗೆ ₹2,500 ಮಾತ್ರ ಪಡೆದುಕೊಳ್ಳಬೇಕು. ಆದರೆ, ಹೆಚ್ಚಿನ ದರ ಪಡೆದುಕೊಳ್ಳಲಾಗುತ್ತಿದೆ ಎಂಬ ದೂರಿನನ್ವಯ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ’ ಎಂದರು.
ಕೊರೊನಾ ಸೋಂಕಿನಿಂದ ಆರೋಗ್ಯ, ಹಣ ಕಳೆದುಕೊಳ್ಳುತ್ತಿರುವ ಜನರಿಗೆ ಹೆಚ್ಚಿನ ಹೊರೆ ಹೊರಿಸುವುದು ನ್ಯಾಯವಲ್ಲ. ಇದರಿಂದ ಅವರ ಆತ್ಮಬಲ ಕುಗ್ಗುತ್ತದೆ’ ಎಂದು ಹೇಳಿದರು.
‘ನಿಗದಿಪಡಿಸಿದ ದರಪಟ್ಟಿಯನ್ನು ಕನ್ನಡ, ಇಂಗ್ಲಿಷ್, ಮರಾಠಿ ಹಾಗೂ ಹಿಂದಿಯಲ್ಲಿ ದೊಡ್ಡದಾಗಿ ಬರೆದು ಆಸ್ಪತ್ರೆ ಪ್ರವೇಶ ದ್ವಾರದ ಬಳಿ ಲಗತ್ತಿಸಬೇಕು’ ಎಂದೂ ಅವರು ಸಲಹೆ ನೀಡಿದರು.