ಬೀದರ್: ‘ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ಕೊಡಬೇಕು. ಮಕ್ಕಳು ಪಾಲಕರ ನಡೆ–ನುಡಿ ಅನುಕರಿಸುತ್ತಾರೆ. ಮಕ್ಕಳ ಎದುರಲ್ಲಿ ಪಾಲಕರು ಸಂಸ್ಕಾಯುತವಾಗಿ ನಡೆದುಕೊಳ್ಳಬೇಕು’ ಎಂದು ನೆರೆಯ ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವಧೂತರು ಹೇಳಿದರು.
ಬೀದರ್ ತಾಲ್ಲೂಕಿನ ಚಿಟ್ಟಾ ಗ್ರಾಮದಲ್ಲಿ ಶೇಷಮ್ಮಾದೇವಿಯ 3ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
‘ಪ್ರತಿ ವರ್ಷ ಜನ್ಮದಿನದ ಹೆಸರಲ್ಲಿ ದುಂದು ವೆಚ್ಚ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅದರ ಬದಲಾಗಿ ನಿರ್ಗತಿಕರಿಗೆ ಅನ್ನ ದಾಸೋಹ ಮಾಡಬೇಕು. ಈ ಮೂಲಕ ಪುಣ್ಯಪ್ರಾಪ್ತಿ ಮಾಡಿಕೊಳ್ಳಬೇಕು’ ಎಂದರು.
ಗ್ರಾಮದ ಮುಖಂಡರಾದ ಹಣಮಂತ ಪಾಟೀಲ ಚಿಟ್ಟಾ, ಶಿವಾಜಿ ಪಾಟೀಲ, ವೆಂಕಟರಾವ್ ಪಾಟೀಲ, ಅಣ್ಣರಾವ್ ಪಾಟೀಲ, ನಾರಾಯಣರಾವ್ ಪಾಪೈನೋರ್, ಕಾಶಿಲಿಂಗ ಅಗ್ರಹಾರ, ಚಾಂದಪಾಶಾ ಇದ್ದರು.
ಮೆರವಣಿಗೆ: ಇದಕ್ಕೂ ಮೊದಲು ಗ್ರಾಮದ ಜೈ ಭವಾನಿ ಮಾತಾ ದೇವಸ್ಥಾನದಿಂದ ಶೇಷಮ್ಮಾದೇವಿ ಮಂದಿರದ ವರೆಗೆ ಬಸವಲಿಂಗ ಅವಧೂತರ ಬೆಳ್ಳಿರಥದಲ್ಲಿ ಮೆರವಣಿಗೆ ನಡೆಯಿತು. ಕುಂಭ ಕಳಶ ಹೊತ್ತ ಮಹಿಳೆಯರು, ಮಕ್ಕಳ ಕೋಲಾಟ, ಹಲಿಗೆ ಕುಣಿತ ಗಮನ ಸೆಳೆಯಿತು. ಗ್ರಾಮದ ಜನ ಭಕ್ತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.