ಔರಾದ್: ತಾಲ್ಲೂಕಿನ ಬಲ್ಲೂರ್ (ಜೆ) ಗ್ರಾಮದಲ್ಲಿ ₹90 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಸಿಪೆಟ್ ಕಾಲೇಜಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
‘ಕಾಲೇಜಿಗೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ಕೇಂದ್ರ ಸಚಿವ ಭಗವಂತ ಖೂಬಾ ಅವರ ನೇತೃತ್ವದಲ್ಲಿ ಬೀದರ್ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಕೆಲಸ ಆಗುತ್ತಿರುವುದು ನಮ್ಮೆಲ್ಲರಿಗೂ ಸಂತೋಷದ ವಿಷಯ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ತಲಾ ಶೇ 45% ಅನುದಾನ ನೀಡಲಾಗುತ್ತಿದೆ’ ಎಂದು ತಿಳಿಸಿದರು.
ಪ್ಲಾಸ್ಟಿಕ್ ಸಂಸ್ಕರಣಾ ತಂತ್ರಜ್ಞಾನ, ಪ್ಲಾಸ್ಟಿಕ್ ಮರುಬಳಕೆ, ಮೂಲಯಂತ್ರ ಪ್ಲಾಸ್ಟಿಕ್ ಉತ್ಪನ್ನ ಮತ್ತು ಅಚ್ಚು ವಿನ್ಯಾಸ, ಅಚ್ಚು ತಯಾರಿಕೆ, ಕಂಪ್ಯೂಟರ್ ಹಾರ್ಡವೇರ್ ಮತ್ತು ನೆಟ್ವರ್ಕಿಂಗ್, ವಿದ್ಯುತ್ ನಿರ್ವಹಣೆ, ಸುಧಾರಿತ ಯಂತ್ರ ನಿರ್ವಹಣೆ ಕ್ಷೇತ್ರಗಳಲ್ಲಿ ವರ್ಷಕ್ಕೆ ಸುಮಾರು ಎರಡು ಸಾವಿರ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾಲೇಜು ಸ್ಥಾಪನೆಯಿಂದ ಇಂಜಿಕ್ಷನ್ ಮೋಲ್ಡಿಂಗ್, ಬ್ಲೋ ಮೋಲ್ಡಿಂಗ್ ರೊಟೊಮೊಲ್ಡಿಂಗ್, ಪ್ಲಾಸ್ಟಿಕ್ ಮೋಲ್ಡ್ ತಯಾರಿಕೆ, ಸಿಎನ್ಸಿ ಲೇಥ್ ಪ್ರೋಗ್ರಾಮಿಂಗ್ ಮತ್ತು ಕಾರ್ಯಾಚರಣೆ, ಸಿಎನ್ಸಿ ಮಿಲ್ಲಿಂಗ್ ಪ್ರೋಗ್ರಾಮಿಂಗ್ ಮತ್ತು ಕಾರ್ಯಾಚರಣೆ, ಯಂತ್ರೋಪಕರಣಗಳಂತಹ ವಿವಿಧ ಕೋರ್ಸ್ ಮಾಡಲು ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಕೇಂದ್ರ ಸಚಿವ ಭಗವಂತ ಖೂಬಾ, ವಿಧಾನ ಪರಿಷತ್ ಸಭಾಪತಿ ರಘುನಾಥರಾವ ಮಲ್ಕಾಪೂರೆ, ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಸಚಿವರಾದ ಗೋವಿಂದ ಕಾರಜೋಳ, ಪ್ರಭು ಚವಾಣ್, ಬಲ್ಲೂರ ಜೆ ಗ್ರಾಮ ಪಂಚಾಯತ ಅಧ್ಯಕ್ಷ ಮಹೇಶ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಸಹಾಯಕ ಆಯುಕ್ತ ಮೊಹಮ್ಮದ ನಯಿಮ್ ಮೋಮಿನ್, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಸುರೇಖಾ ಮುನ್ನೊಳ್ಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರತೇಂದ್ರನಾಥ ಸುಗೂರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.