ಬೀದರ್: ವಾಸವಿ ಕನ್ಯಕಾ ಪರಮೇಶ್ವರಿ ಜಯಂತಿಯನ್ನು ನಗರದಲ್ಲಿ ಮಂಗಳವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ನಗರದ ಚೌಬಾರಾ ಸಮೀಪದ ಕನ್ಯಕಾ ಪರಮೇಶ್ವರಿ ಮಂದಿರದಲ್ಲಿ ದಿನವಿಡೀ ಶ್ರದ್ಧಾ ಭಕ್ತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ, ಮಧ್ಯಾಹ್ನ ತೊಟ್ಟಿಲು, ಲಲಿತ ಸಹಸ್ರನಾಮ ಪಾರಾಯಣ, ಮಹಾ ಪ್ರಸಾದ, ಸಂಜೆ ಶೋಭಾಯಾತ್ರೆ ಜರುಗಿದವು.
ಮಂದಿರದಿಂದ ಆರಂಭಗೊಂಡ ಶೋಭಾಯಾತ್ರೆಯು ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಮುಖ್ಯ ರಸ್ತೆ, ವಿನಾಯಕ ವೃತ್ತ, ಚೌಬಾರಾ ಮಾರ್ಗವಾಗಿ ಹಾಯ್ದು ಪುನಃ ಮಂದಿರಕ್ಕೆ ತಲುಪಿ ಮುಕ್ತಾಯಗೊಂಡಿತು. ಅಲಂಕೃತ ರಥದಲ್ಲಿ ವಾಸವಿ ಕನ್ಯಕಾ ಪರಮೇಶ್ವರಿ ಭಾವಚಿತ್ರ ಇಡಲಾಗಿತ್ತು.
ಮಹಿಳೆಯರು, ಯುವತಿಯರು ಕೆಂಪು ಬಣ್ಣದ ಸೀರೆ, ಪುರುಷರು ಬಿಳಿ ಬಣ್ಣದ ವಸ್ತ್ರ ಧರಿಸಿ ಗಮನ ಸೆಳೆದರು.
ಆರ್ಯ ವೈಶ್ಯ ಸಂಘದ ಅಧ್ಯಕ್ಷ ಡಿ.ವಿ. ಸಿಂದೋಲ, ಉಪಾಧ್ಯಕ್ಷ ದಿಗಂಬರ ಪೋಲಾ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೋಲಾ, ಚಂದ್ರಶೇಖರ ಗಾದಾ, ವೆಂಕಟೇಶ ಬೋರಾಳಕರ್, ಸುನೀಲ ವೆಂಗಪಲ್ಲಿ, ದತ್ತಾತ್ರಿ ದಾಚೆಪಲ್ಲಿ, ಕೃಷ್ಣಮೂರ್ತಿ, ಶ್ರೀನಿವಾಸ ಗಾದಗಿ ಮೊದಲಾದವರು ಭಾಗವಹಿಸಿದ್ದರು.