ಬೀದರ್: ‘ಕವನ,ಕಥೆ, ಕಾದಂಬರಿಗಳು ಕವಿಯ ಗರ್ಭದಿಂದ ಜನ್ಮ ತಾಳಿದ ಕೂಸಾಗಿರುತ್ತವೆ’ ಎಂದು ಕರ್ನಾಟಕ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರಕಾಶ ಲಕಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಕಾಲೇಜನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಹಾಗೂ ಕರ್ನಾಟಕ ಸಾಹಿತ್ಯ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜಾಣ ಜಾಣೆಯರ ಬಳಗದ ಪುಸ್ತಕ ಪ್ರಕಾಶನ, ಕರಡಚ್ಚು ತಿದ್ದುವುದರ ಕುರಿತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ ಕವನಗಳಿಂದ ಕೂಡಿದ ಪುಸ್ತಕವು ಓದುಗರ ಹೃದಯ ಗೆಲ್ಲಬೇಕಾದರೆ ಕರಡಚ್ಚು ತಿದ್ದುಪಡಿದಾರರ ಪಾತ್ರ ಮಹತ್ವದ್ದಾಗಿರುತ್ತದೆ’ ಎಂದು ಹೇಳಿದರು.
ಪತ್ರಕರ್ತ ಸದಾನಂದ ಜೋಶಿ ಮಾತನಾಡಿ,‘ ಕರಡಚ್ಚು ತಿದ್ದುಪಡಿದಾರರಿಗೆ ಶಬ್ಧ ಭಂಡಾರ, ಭಾಷಾ ಜ್ಞಾನ ಅವಶ್ಯಕವಾಗಿರುತ್ತದೆ. ಭಾಷಾ ಪ್ರಬುದ್ಧತೆ, ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮ ಕರಡಚ್ಚು ತಿದ್ದುಪಡಿದಾರರ ಗೌರವ ಹೆಚ್ಚಿಸುತ್ತದೆ’ ಎಂದು ತಿಳಿಸಿದರು.
ಕರ್ನಾಟಕ ಕಾಲೇಜ ಕನ್ನಡ ಸಾಹಿತ್ಯ ವಿಭಾಗದ ಮುಖ್ಯಸ್ಥ ಜಗನ್ನಾಥ ಹೆಬ್ಬಾಳೆ ಮಾತನಾಡಿ,‘ಮಕ್ಕಳು ಬರೆಯುವ ಗೀಳು ಹೆಚ್ಚಿಸಿಕೊಳ್ಳಬೇಕು. ಸತತವಾಗಿ ಬರೆಯುವುದರಿಂದ ವ್ಯಾಕರಣ, ಛಂದಸ್ಸು, ಹೃಸ್ವ, ದೀರ್ಘದ ಜ್ಞಾನ ವೃದ್ಧಿಯಾಗುತ್ತದೆ’ ಎಂದು ತಿಳಿಸಿದರು.
‘ವಿದ್ಯಾರ್ಥಿಗಳು ದಾಸರ,ಶರಣರ, ಸಂತರ, ಹಿರಿಯ ಸಾಹಿತಿಗಳ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ವ್ಯಕ್ತಿತ್ವವೂ ಉತ್ತಮ ಉಡುಪುಗಳನ್ನು ಧರಿಸುವುದರಿಂದ ನಿರ್ಮಾಣವಾಗುವುದಿಲ್ಲ. ಬದಲಾಗಿ ಸ್ಪಷ್ಟವಾಗಿ ಬರೆಯುವ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.