ಹುಮನಾಬಾದ್: ಉದ್ಯೋಗ ಖಾತ್ರಿ ಯೋಜನೆ ಅಡಿ ಹೆಚ್ಚುವರಿ ಕೆಲಸ ಹಾಗೂ ಕೂಲಿ ನೀಡಬೇಕು ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ತಾಲ್ಲೂಕಿನ ಸೀತಾಳಗೇರಾ ಗ್ರಾಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈಜಿನಾಥ ಫುಲೆ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.
ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಸಂಯೋಜಕಿ ಸಪ್ನಾ ಭಾವಿಮನಿ ಮಾತನಾಡಿ,‘ಕೊರೊನಾ ಹಾವಳಿಯಿಂದಾಗಿ ರಾಜ್ಯದ ಬಡ ಕೂಲಿ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಬ್ಬ ವ್ಯಕ್ತಿಗೆ ವಾರ್ಷಿಕ 200 ದಿನಗಳ ಕಾಲ ಕಡ್ಡಾಯವಾಗಿ ಕೆಲಸ ನೀಡಿ ಸರಿಯಾದ ಸಮಯಕ್ಕೆ ಕೂಲಿ ನೀಡಬೇಕು’ ಎಂದರು.
ನರೇಗಾ ಕಾಮಗಾರಿಗಳನ್ನು ಸ್ಥಳೀಯವಾಗಿ ನಿರ್ಧರಿಸಬೇಕು. ಸ್ಥಳೀಯ ಕಾರ್ಮಿಕರಿಗೆ ಕೆಲಸ ಕೊಟ್ಟು ದಿನಕ್ಕೆ ₹600 ಕೂಲಿ ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಪ್ರಮುಖರಾದ ಮುತ್ತಮ್ಮ ಹಿಲಾಲಪೂರ, ಸುರೇಖಾ ಸೀತಾಳಗೇರಾ, ಆಶಾ ಬೋರಳ, ಮಿಲೇಖಾ ಬೋರಳಕರ್ ಹಾಗೂ ಸುಜಾತಾ ಬೋರಳಕರ್ ಇದ್ದರು.