ಬೀದರ್: ಸಾಹಿತಿ ಪ್ರೊ. ಎಚ್.ಎಂ. ಮಹೇಶ್ವರಯ್ಯ ಅವರು ಜೀವಮಾನ ಸಾಧನೆಗಾಗಿ ತಮಗೆ ನೀಡಿದ್ದ ರಾಷ್ಟ್ರೀಯ ಗೋ.ರು.ಚ ಪ್ರಶಸ್ತಿಯ ₹ 51 ಸಾವಿರವನ್ನು ಅನುಭವ ಮಂಟಪಕ್ಕೆ ನೀಡಿ ಔದರ್ಯ ಮೆರೆದಿದ್ದರು ಎಂದು ಪ್ರಾಚಾರ್ಯ ಡಾ. ಜಗನ್ನಾಥ ಹೆಬ್ಬಾಳೆ ಹೇಳಿದರು.
ನಗರದ ಕರ್ನಾಟಕ ಕಾಲೇಜಿನಲ್ಲಿ ಸಾಹಿತಿಗಳಾದ ಡಾ. ಸಿದ್ದಲಿಂಗಯ್ಯ ಹಾಗೂ ಪ್ರೊ. ಎಚ್.ಎಂ. ಮಹೇಶ್ವರಯ್ಯ ಅವರಿಗೆ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹೇಶ್ವರಯ್ಯ ಅವರು ಹಲವು ದೇಶಗಳಲ್ಲಿ ವಿಚಾರ ಸಂಕಿರಣ ಆಯೋಜಿಸಿ ಖ್ಯಾತಿ ಗಳಿಸಿದ್ದರು. ಕರ್ನಾಟಕ ಸಾಹಿತ್ಯ ಸಂಘದಲ್ಲಿ ಪ್ರತಿ ವರ್ಷ ಅವರ ಹೆಸರಿನಲ್ಲಿ ದತ್ತಿ ಉಪನ್ಯಾಸ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
‘ಸಿದ್ದಲಿಂಗಯ್ಯ ಅವರು ತುಳಿತಕ್ಕೊಳಗಾದವರು, ನೊಂದವರು ಹಾಗೂ ಶೋಷಿತರ ಧ್ವನಿಯಾಗಿದ್ದರು. ತಮ್ಮನ್ನು ದಲಿತ ಕವಿ ಎಂದು ಕರೆಯಬೇಡಿ, ದೇಶದ ಕವಿ ಎಂದು ಕರೆಯಿರಿ ಎಂದು ಯಾವಾಗಲೂ ಹೇಳುತ್ತಿದ್ದರು’ ಎಂದು ಸ್ಮರಿಸಿದರು.
ಪ್ರಾಧ್ಯಾಪಕ ಡಾ.ಉಮಾಕಾಂತ ಪಾಟೀಲ, ಡಾ.ಸುನಿತಾ ಕೂಡ್ಲಿಕರ್ ಮಾತನಾಡಿದರು.
ಎರಡು ನಿಮಿಷಗಳ ಮೌನ ಆಚರಿಸಿ ಸಿದ್ದಲಿಂಗಯ್ಯ ಹಾಗೂ ಮಹೇಶ್ವರಯ್ಯ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಪ್ರೊ. ರಾಜೇಂದ್ರ ಬಿರಾದಾರ, ಡಾ. ಮಲ್ಲಿಕಾರ್ಜುನ ಹಂಗರಗಿ, ಬಸವರಾಜ ಕೂಡಂಬಲ, ಡಾ. ಮಲ್ಲಿಕಾರ್ಜುನ ಚಲವಾ, ಶ್ರೀಕಾಂತ ದೊಡ್ಡಮನಿ, ಅನಿಲಕುಮಾರ ಚಿಕ್ಕಮಾಣೂರ, ಪ್ರೊ. ವೈಜಿನಾಥ ಚಿಕ್ಕಬಸೆ, ಪ್ರೊ. ಸಂಗೀತಾ ಮಾನಾ, ಸಚಿನ್ ವಿಶ್ವಕರ್ಮ, ಡಾ. ಪೂಜಾ ಸೂರ್ಯವಂಶಿ, ಸುನೀಲ್ ಮೂಲಗೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.