ಹುಮನಾಬಾದ್: ತಾಲ್ಲೂಕಿನ ಮಾಣಿಕ್ ನಗರ ಗ್ರಾಮದ ಮಾಣಿಕ್ ಪ್ರಭು ಸಂಸ್ಥಾನದಲ್ಲಿ 205ನೇ ಜಾತ್ರಾ ಮಹೋತ್ಸವದ ಅಂಗವಾಗಿ ತೀರ್ಥಸ್ನಾನ, ಯೋಗದಂಡ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಮಹಾಮಂತ್ರ ಪಠಣ, ಭಕ್ತ ಕಾರ್ಯ, ಕಲ್ಲಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬಾಜಾ–ಭಜಂತ್ರಿ, ಜಯಘೋಷಗಳ ಮಧ್ಯೆ ಮಾಣಿಕ್ ಪ್ರಭು ಸಂಸ್ಥಾನದ ಪೀಠಾಧಿಪತಿ ಡಾ.ಜ್ಞಾನರಾಜ್ ಮಾಣಿಕಪ್ರಭು ನೇತೃತ್ವದಲ್ಲಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಡಾ.ಜ್ಞಾನರಾಜ್ ಮಾಣಿಕ್ ಪ್ರಭು ಮಹಾರಾಜರು ತೀರ್ಥಸ್ನಾನ ಮಾಡಿಕೊಂಡು ಪ್ರಭುಗಳ ಸಮಾಧಿಗೆ ನಮಿಸಿದರು.
ಬಳಿಕ ವಿದ್ಯಾರ್ಥಿಗಳು ಹಾಗೂ ವೈದಿಕರು ರುದ್ರ ಪಠಣ ಮಾಡಿದರು.
ನಂತರ ದಿವ್ಯ ಸಮಾಧಿಗೆ ಡಾ.ಜ್ಞಾನರಾಜ್ ಮಾಣಿಕಪ್ರಭು ಮಹಾರಾಜರು ಆರತಿ ಬೆಳಗಿದರು. ದೇವಸ್ಥಾನಕ್ಕೆ ಬಂದ ಭಕ್ತರಿಗೆ ಶ್ರೀಗಳು ತೀರ್ಥ ವಿತರಿಸಿದರು.
ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಮಾಣಿಕ್ ಪ್ರಭು ಮಹಾರಾಜರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಮಾಣಿಕ್ ಪ್ರಭು ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಆನಂದರಾಜ ಪ್ರಭು, ಸಹ ಕಾರ್ಯದರ್ಶಿ ಚೈತನ್ಯರಾಜ್ ಪ್ರಭು, ಚಾರುದತ್ತ ಪ್ರಭು, ಚಂದ್ರಹಾಸ್ ಪ್ರಭು, ಮಾಣಿಕ್ ಪ್ರಭು ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕಿ ಸುಮಂಗಲಾ ಜಾಗೀರದಾರ ಸೇರಿದಂತೆ ಇತರರು ಇದ್ದರು.