‘ಆಸ್ಪತ್ರೆಗಳ ಆವರಣದಲ್ಲಿ ಔಷಧೀಯ ಸಸಿ ನೆಡಿ’

ಬೀದರ್: ನೀರಿನ ವ್ಯವಸ್ಥೆ ಇರುವ ಜಿಲ್ಲೆಯ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ವನಸ್ಪತಿ ಉದ್ಯಾನಕ್ಕಾಗಿ ಅಗತ್ಯ ಔಷಧೀಯ ಸಸಿಗಳನ್ನು ನೆಡಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಗುಣಮಟ್ಟ ಖಾತರಿ ಸಮಿತಿ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
ಹಳೆಯ ಕಟ್ಟಡ ಹೊಂದಿದ ಆಸ್ಪತ್ರೆಗಳ ಪಟ್ಟಿ ಮಾಡಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಅವರಿಗೆ ಸಲ್ಲಿಸಬೇಕು. ತಾಲ್ಲೂಕು ವೈದ್ಯಾಧಿಕಾರಿ ಗಳು ಈ ಸಂಬಂಧ ಆಯಾ ತಹಶೀಲ್ದಾರ ರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಎಲ್ಲ ಆರೋಗ್ಯ ಸಂಸ್ಥೆಗಳು ಟೆಂಡರ್ ಕರೆದು ಒಂದು ತಿಂಗಳೊಳಗೆ ನಿರುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ವಿಫಲವಾದ ಪ್ರಕರಣಗಳಿಗೆ ತುರ್ತಾಗಿ ಪರಿಹಾರ ಧನ ಒದಗಿಸಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗೆ ಸೂಚಿಸಿದರು.
ಅಂತರ ಮತ್ತು ಛಾಯಾ ಗುರಿ ಸಾಧನೆಯಲ್ಲಿ ಬೀದರ್ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ವೈದ್ಯಾಧಿಕಾರಿ ಡಾ.ಶಿವಶಂಕರ ಸಭೆಗೆ ವಿವರಿಸಿದರು.
ಟ್ಯೂಬೆಕ್ಟಮಿ ಎಂಪಾನಲಮೆಂಟ್ ಗಾಗಿ ಐದು ಖಾಸಗಿ ಆಸ್ಪತ್ರೆಗಳಿಗೆ ಸಭೆಯಲ್ಲಿ ಅನುಮತಿ ನೀಡಲಾಯಿತು. ಸಿ.ಎ.ಸಿ ಸುರಕ್ಷಿತ ಗರ್ಭಪಾತಗಳನ್ನು ಮಾಡಲು ಮನವಿ ಸಲ್ಲಿಸಿದ್ದ ವೈದ್ಯರಿಗೆ ಕೂಡ ಇದೇ ವೇಳೆ ಅನುಮತಿ ನೀಡಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಡಿಎಚ್ಒ ಡಾ. ವಿ.ಜಿ. ರೆಡ್ಡಿ, ಡಾ.ಮಹೇಶ ಬಿರಾದಾರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.