ಬೀದರ್: ಸಂಸದ ಭಗವಂತ ಖೂಬಾ ಅಧ್ಯಕ್ಷತೆಯಲ್ಲಿ ಇಲ್ಲಿಯ ಕುಂಬಾರವಾಡದ ಲೀಡ್ ಬ್ಯಾಂಕ್ ಕಚೇರಿಯ ಸಭಾಂಗಣದಲ್ಲಿ ಬ್ಲಾಕ್ ಮಟ್ಟದ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಯಿತು.
‘2021-22ನೇ ಸಾಲಿನಲ್ಲಿ ರೈತರ ನೋಂದಣಿ ಮಾಡಿಸುವುದರಿಂದ ಹಿಡಿದು ಅವರಿಗೆ ಬೆಳೆ ಪರಿಹಾರ ಒದಗಿಸುವವರೆಗೂ ಆಸಕ್ತಿಯಿಂದ ಕೆಲಸ ಮಾಡಬೇಕು’ ಎಂದು ಖೂಬಾ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
‘ರೈತರಲ್ಲಿ ಬ್ಯಾಂಕ್ಗಳ ಬಗ್ಗೆ ವಿಶ್ವಾಸ ಮೂಡುವಂತೆ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮ ಸೇವೆ ನೀಡಬೇಕು. ಫಸಲ್ ಬಿಮಾ ಯೋಜನೆ ಅತಿಹೆಚ್ಚು ಪ್ರಚಾರ ಮಾಡಬೇಕು. ಪ್ರಚಾರ ಕೈಗೊಂಡ ವರದಿಯನ್ನು ಮೂರು ದಿನದೊಳಗೆ ನನಗೆ ಸಲ್ಲಿಸಬೇಕು’ ಎಂದು ಸೂಚನೆ ನೀಡಿದರು.
‘ಪಿ.ಎಂ. ಕಿಸಾನ್ ಯೋಜನೆಯಡಿಯಲ್ಲಿ 8ನೇ ಕಂತಿನಲ್ಲಿ ಒಟ್ಟು 1,78,544 ರೈತರಿಗೆ ₹35.7 ಕೋಟಿ ಜಮಾ ಆಗಿದೆ. ಇನ್ನು ಕೆಲವು ರೈತರಿಗೆ ಖಾತೆ ಸಮಸ್ಯೆ, ಅಧಾರ್ ಸಮಸ್ಯೆಯಿಂದ ಹಣ ಜಮಾ ಆಗಿಲ್ಲ. ಈ ತೊಂದರೆಯನ್ನು ವಾರದೊಳಗೆ ಸರಿಪಡಿಸಬೇಕು’ ಎಂದು ಹೇಳಿದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್, ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಎಂ. ಕಮತಗಿ ಹಾಗೂ ವಿವಿಧ ಬ್ಯಾಂಕ್ಗಳ ಅಧಿಕಾರಿಗಳು ಇದ್ದರು.