ಬೀದರ್: ‘ಐಕ್ಯತಾ ಸಮಾವೇಶದಲ್ಲಿ ಮಾಧ್ಯಮದವರ ಕುರಿತು ಉದ್ದೇಶ ಪೂರ್ವಕವಾಗಿ ಮಾತನಾಡಿಲ್ಲ. ನನ್ನ ಮಾತುಗಳಿಂದ ನೋವಾಗಿದ್ದರೆ ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ’ ಎಂದು ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ಹೇಳಿದ್ದಾರೆ.
ಸೆಪ್ಟೆಂಬರ್ 27 ರಂದು ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಐಕ್ಯತಾ ಸಮಾವೇಶದಲ್ಲಿ ಅತಿಥಿಯಾಗಿ ಪಾಲ್ಗೊಂಡು ‘ಟಿವಿ ಮಾಧ್ಯಮಗಳು ಸತ್ಯದ ಪ್ರಸಾರ ಮಾಡಬೇಕು. ಸುದ್ದಿ ವಾಹಿನಿಗಳು ದಾರಿ ತಪ್ಪಿದರೆ ಟಿವಿ, ಕ್ಯಾಮೆರಾಗಳನ್ನು ಒಡೆಯಲು ಹಿಂಜರಿಯುವುದಿಲ್ಲ’ ಎಂದು ಮಾಧ್ಯಮಗಳಿಗೆ ಎಚ್ಚರಿಸಿದ್ದರು.
ಸುದ್ದಿ ವಾಹಿನಿ ಹಾಗೂ ಮುದ್ರಣ ಮಾಧ್ಯಮ ಪ್ರತಿನಿಧಿಗಳು ಬಸವಕಲ್ಯಾಣ ಶಾಸಕರ ಹೇಳಿಕೆಯನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಿಧಾನಸಭಾ ಅಧ್ಯಕ್ಷ ರಮೇಶಕುಮಾರಿ ಅವರಿಗೆ ಮನವಿ ಸಲ್ಲಿಸಿದ್ದರು. ವಿವಿಧೆಡೆ ಪ್ರತಿಭಟನೆ ನಡೆದ ಕಾರಣ ಎಚ್ಚೆತ್ತುಕೊಂಡ ಶಾಸಕ ಶನಿವಾರ ಬೇಷರತ್ ಕ್ಷಮೆ ಯಾಚಿಸಿದ್ದಾರೆ.