ಭಾಲ್ಕಿ: ಶಾಸಕ ಈಶ್ವರ ಖಂಡ್ರೆ ಅವರ ಸೋಲು ಬರುವ ಚುನಾವಣೆಯಲ್ಲಿ ಖಚಿತ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳಿದರು.
ತಾಲ್ಲೂಕಿನ ಶ್ರೀಮಾಳಿ ಗ್ರಾಮದಲ್ಲಿ 2009-2010ರಲ್ಲಿ ಗ್ರಾಮದ ಕೆರೆ ಒಡೆದು ಬೆಳೆ ನಾಶವಾಗಿದ್ದ ರೈತರಿಗೆ ಸರ್ಕಾರದಿಂದ ಸುಮಾರು ₹4.75 ಕೋಟಿ ಪರಿಹಾರ ಕೊಡಿಸಿದ್ದಕ್ಕಾಗಿ ರೈತ ರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಫಲವತ್ತಾದ ಮಣ್ಣು, ಭೂಮಿಯನ್ನು ಕಳೆದುಕೊಂಡು ಸಂಕಷ್ಟ ಅನುಭವಿಸಿದ ರೈತರ ನೋವು ಶಾಸಕ ಈಶ್ವರ ಖಂಡ್ರೆ ಕಣ್ಣಿಗೆ ಕಂಡಿಲ್ಲವೇ. ಪರಿಹಾರ ಕೊಡಿಸಲು ಏಕೆ ಮುಂದಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಮತ್ತು ರಾಜೇಂದ್ರ ವರ್ಮಾ ಶಾಸಕರಿದ್ದ ಸಂದರ್ಭದಲ್ಲಿ ಮಾಡಿದ ಕೆಲಸಗಳನ್ನು ನಾನು ಮಾಡಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. 2008 ರಿಂದ 2018 ರವರೆಗೆ ನಾನಾ ಕಾರಣಗಳಿಂದ ಬಿಜೆಪಿಯಲ್ಲಿ ಉಂಟಾಗಿದ್ದ ಒಡಕಿನಿಂದ ಈಶ್ವರ ಖಂಡ್ರೆ ಜಯ ಗಳಿಸಿದ್ದರು. ಈಗ ನಾವೆಲ್ಲರೂ ಸಂಕಲ್ಪ ಮಾಡಿದ್ದು, ಎಲ್ಲರೂ ಒಗ್ಗಟ್ಟಾಗಿದ್ದೇವೆ. ಈ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಅವರ ಸೋಲು ಖಚಿತ ಎಂದು ಹೇಳಿದರು.