ಬೀದರ್: ಶಾಸಕ ರಹೀಂ ಖಾನ್ ಮಂಗಳವಾರ ತಾಲ್ಲೂಕಿನಲ್ಲಿ ಪ್ರವಾಸ ಕೈಗೊಂಡು ವಿವಿಧ ಗ್ರಾಮಸ್ಥರ ಅಹವಾಲು ಆಲಿಸಿದರು.
ಬೀದರ್ ತಾಲ್ಲೂಕಿನ ಜಾಂಪಡ, ಕಪಲಾಪುರ, ಅಮದಲ್ಪಾಡ್, ಮಾಳೆಗಾಂವ, ಮಿರ್ಜಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಮಾಳೆಗಾಂವ ಮತ್ತು ಜಾಂಪಡದಲ್ಲಿ ನರೇಗಾ ಕಾಮಗಾರಿ ಪರಿಶೀಲಿಸಿದರು.
ಮಾಳೆಗಾಂವದ ರಸಗೊಬ್ಬರ ವಿತರಣಾ ಕೇಂದ್ರಕ್ಕೆ ಶಾಸಕರು ಭೇಟಿ ನೀಡಿ, ಅಲ್ಲಿ ರಸಗೊಬ್ಬರ ಲಭ್ಯತೆ ಬಗ್ಗೆ ಮಾಹಿತಿ ಪಡೆದರು. ಇದೆ ವೇಳೆ ರೈತರ ಅಹವಾಲು ಆಲಿಸಿದರು. ಮಾಳೆಗಾಂವದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗ್ರಾಮಸ್ಥರು ಶಾಸಕರಿಗೆ ದೂರಿದರು.
ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಗಮನ ಹರಿಸುವಂತೆ ಶಾಸಕರು ಪಿಡಿಒಗೆ ಸೂಚನೆ ನೀಡಿದರು.
‘ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಸಂಬಂಧಪಟ್ಟವರೊಂದಿಗೆ ಮಾತನಾಡಿ ನಿರಂತರ ವಿದ್ಯುತ್ ಪೂರೈಕೆ ಮಾಡಲು ಜೆಸ್ಕಾಂಗೆ ನಿರ್ದೇಶನ ನೀಡಬೇಕು’ ಎಂದು ಮಿರ್ಜಾಪುರ ಮತ್ತು ಜಾಂಪಡ ಗ್ರಾಮಸ್ಥರು ಮನವಿ ಮಾಡಿದರು.
ಕಪಲಾಪುರ ಮತ್ತು ಮಿರ್ಜಾಪುರ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಯೊಬ್ಬರು ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಕೋರಿದರು.