ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಕಲ್ಯಾಣದ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಚಂದ್ರಶೇಖರ ಪಾಟೀಲ ಭರವಸೆ

ಈಶಾನ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಭರವಸೆ
Published 30 ಮೇ 2024, 4:24 IST
Last Updated 30 ಮೇ 2024, 4:24 IST
ಅಕ್ಷರ ಗಾತ್ರ

ಡಾ. ಚಂದ್ರಶೇಖರ ಪಾಟೀಲ ಹುಮನಾಬಾದ್‌ ಅವರು ಪುನರಾಯ್ಕೆ ಬಯಸಿ ಎರಡನೇ ಬಾರಿಗೆ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ‘ಈ ಸಲ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ನನ್ನ ಗೆಲುವು ಖಚಿತ’ ಎಂಬ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಚುನಾವಣಾ ಪ್ರಚಾರದ ನಡುವೆ ಬಿಡುವು ಮಾಡಿಕೊಂಡು ಬುಧವಾರ ‘ಪ್ರಜಾವಾಣಿ’ ಜೊತೆಗೆ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಂತಿದೆ:

* ಚುನಾವಣಾ ಪ್ರಚಾರ ಹೇಗೆ ನಡೆಯುತ್ತಿದೆ? ಮತದಾರರ ಪ್ರತಿಕ್ರಿಯೆ ಹೇಗಿದೆ?

ಪ್ರಚಾರ ಬಹಳ ಬಿಸಿ ಹಿಡಿದುಕೊಂಡಿದೆ. ಎಲ್ಲ ಕಡೆ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಔರಾದ್‌ನಿಂದ ಹರಪನಹಳ್ಳಿವರೆಗೆ ಪ್ರಚಾರ ಕೈಗೊಂಡಿದ್ದೇನೆ. ರಾಜ್ಯದಲ್ಲಿ ಜನಪರ ಕಾಂಗ್ರೆಸ್‌ ಸರ್ಕಾರವಿದೆ. ಎನ್‌ಪಿಎಸ್‌ನಿಂದ ಒಪಿಎಸ್‌ ಆಗುತ್ತದೆ ಎಂಬ ವಿಶ್ವಾಸ ಇದೆ. ಎಲ್ಲ ಸರ್ಕಾರಿ ನೌಕರರು ನನಗೆ ಮತ ಹಾಕುವ ಒಲವು ಹೊಂದಿದ್ದಾರೆ.

* ಈ ಸಲ ಮತದಾರರ ಸಂಖ್ಯೆ ದುಪ್ಪಟ್ಟಾಗಿದೆ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೇ?

ಸರ್ಕಾರ ಸಾಕಷ್ಟು ಜಾಗೃತಿ ಮೂಡಿಸಿರುವುದರಿಂದ ಈ ಸಂಖ್ಯೆ ದುಪ್ಪಟ್ಟಾಗಿದೆ. ಹೆಚ್ಚಿನ ಪದವೀಧರರು ನೋಂದಣಿ ಮಾಡಿಸಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕದ ಕ್ಷೇತ್ರ ರಾಜ್ಯದಲ್ಲಿಯೇ ದೊಡ್ಡದು ಕೂಡ ಹೌದು.

* ಪುನರಾಯ್ಕೆ ಬಯಸಿ ಚುನಾವಣೆಗೆ ನಿಂತಿದ್ದೀರಿ. ಪದವೀಧರರು ಪುನರಾಯ್ಕೆ ಮಾಡುವ ವಿಶ್ವಾಸವಿದೆಯೇ?

ಹಿಂದೆ ನಾನು ಚುನಾಯಿತನಾದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಕಾಂಗ್ರೆಸ್‌ ಬಗ್ಗೆ ಜನರಿಗೆ ಒಲವು ಇದೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ 44 ಜನ ಶಾಸಕರು ಬರುತ್ತಾರೆ. ಅದರಲ್ಲಿ 27 ಕಾಂಗ್ರೆಸ್‌ ಶಾಸಕರು, 8 ಜನ ಸಚಿವರಿದ್ದಾರೆ. ನಮ್ಮ ಸರ್ಕಾರದ ಕೆಲಸದಿಂದ ರಾಜ್ಯದ ಜನ ಸಂತುಷ್ಟರಾಗಿದ್ದಾರೆ. 32 ಸಾವಿರ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆಗಿದೆ. ಅತಿಥಿ ಶಿಕ್ಷಕರ ವೇತನ ಹೆಚ್ಚಿಸಲಾಗಿದೆ. 14 ಸಾವಿರ ಜನರಿಗೆ ಉದ್ಯೋಗಾವಕಾಶಗಳನ್ನು ನೀಡಲಾಗಿದೆ. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಎರಡು ತಿಂಗಳಲ್ಲಿ ಸರ್ಕಾರ ತುಂಬಲಿದೆ.

* ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಂತೆ ಕಾಣುತ್ತಿದೆ. ನಿಮ್ಮ ಸ್ಪರ್ಧೆ ಯಾರೊಂದಿಗೆ ಇದೆ ಎಂದು ಅನಿಸುತ್ತದೆ?

ಬಿಜೆಪಿಯ ಅಮರನಾಥ ಪಾಟೀಲ ಅವರೊಂದಿಗೆ ನನ್ನ ನೇರ ಸ್ಪರ್ಧೆ ಇದೆ. ಈ ಚುನಾವಣೆಯಲ್ಲಿ ಪಕ್ಷೇತರರಿಗೆ ವರ್ಕೌಟ್‌ ಆಗುವುದಿಲ್ಲ. ಔರಾದ್‌ನಿಂದ ಹರಪನಹಳ್ಳಿವರೆಗೆ ವಿಸ್ತಾರವಾದ ದೊಡ್ಡ ಕ್ಷೇತ್ರವಿದು. ನೂರಾರು ಹಳ್ಳಿಗಳು ಇದರ ವ್ಯಾಪ್ತಿಗೆ ಬರುತ್ತವೆ. ಬೀದರ್‌, ಕಲಬುರಗಿಯಲ್ಲಿ ಹೆಚ್ಚಿನ ಮತದಾರರು ಇದ್ದಾರೆ. ನಾನು ಕೂಡ ಈ ಭಾಗದವನು ಆಗಿರುವುದರಿಂದ ನನಗೆ ಹೆಚ್ಚು ಅನುಕೂಲವಿದೆ. 25 ಸಾವಿರ ಮತದಾರರು ಬೀದರ್‌ನಲ್ಲಿ, 38 ಸಾವಿರ ಕಲಬುರಗಿಯಲ್ಲಿ ಇದ್ದಾರೆ.

* ಈ ಸಲ ಒಂದುವೇಳೆ ಗೆದ್ದರೆ ಏನು ಮಾಡಬೇಕೆಂಬ ಕನಸಿದೆ?

ಎನ್‌ಪಿಎಸ್‌ನಿಂದ ಒಪಿಎಸ್‌ ಮಾಡುವುದು ಮೊದಲ ಕೆಲಸ. ಅದು ನಮ್ಮ ಪ್ರಣಾಳಿಕೆಯಲ್ಲೂ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ಕೆಲಸ ಮಾಡುತ್ತೇನೆ. ಕಲ್ಯಾಣ ಕರ್ನಾಟಕದಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಅವುಗಳನ್ನು ತುಂಬಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ನಾನೊಬ್ಬನೇ ಅಲ್ಲ, ಎಲ್ಲ ಎಂಎಲ್‌ಸಿಗಳೊಂದಿಗೆ ಚರ್ಚಿಸಿ, ಸಮಸ್ಯೆಗಳನ್ನು ಬಗೆಹರಿಸಲು ಕೆಲಸ ಮಾಡುತ್ತೇನೆ. ಎಲೆಕ್ಷನ್‌ ಸಮಯದಲ್ಲಿ ನಮಗೆ ಪಾರ್ಟಿ. ಆನಂತರ ಜನರ ಸಮಸ್ಯೆ ಬಗೆಹರಿಸುವುದೊಂದೆ ಕೆಲಸ.

* ಕಳೆದ ಚುನಾವಣೆಯಲ್ಲಿ ಹೆಚ್ಚಿನ ಮತಗಳು ತಿರಸ್ಕೃತಗೊಂಡಿದ್ದವು. ಇದು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಿತ್ತು. ಅದಕ್ಕೇನಂತಿರಿ?

ಈ ಸಲ ಸಾಕಷ್ಟು ಅರಿವು ಮೂಡಿಸಲಾಗಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಕೂಡ ವಿಡಿಯೊ ಮಾಡಿ ಜಾಗೃತಿ ಮೂಡಿಸಿದ್ದೇವೆ. ಹಿಂದಿನಂತೆ ಆಗುವುದಿಲ್ಲ.

ಡಾ.ಚಂದ್ರಶೇಖರ ಪಾಟೀಲ
ಡಾ.ಚಂದ್ರಶೇಖರ ಪಾಟೀಲ

* ಚಂದ್ರಶೇಖರ ಪಾಟೀಲ ಅವರು ಕಳೆದ ಚುನಾವಣೆಯಲ್ಲಿ ಗೆದ್ದ ನಂತರ ಏನೂ ಕೆಲಸ ಮಾಡಲಿಲ್ಲ. ಅನೇಕ ಜಿಲ್ಲೆಗಳಿಗೆ ಭೇಟಿ ಕೊಟ್ಟಿಲ್ಲ ಎಂಬ ಆರೋಪವಿದೆ. ಅದಕ್ಕೇನು ಹೇಳುವಿರಿ?

ವಿಸ್ತಾರವಾದ ಕ್ಷೇತ್ರವಿದು. ನಾನು ಎಂಎಲ್‌ಸಿ ಆಗಿ ಆಯ್ಕೆಯಾದ ನಂತರ ಮೊದಲೆರೆಡು ವರ್ಷಗಳು ಕೋವಿಡ್‌ನಲ್ಲಿ ಕಳೆದು ಹೋಯಿತು. ಪದವೀಧರರ ಶಿಕ್ಷಕರ ಸಾಕಷ್ಟು ಸಮಸ್ಯೆಗಳಿವೆ. ಮೇಲಿಂದ ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಈಗ ಕಾಂಗ್ರೆಸ್‌ ಸರ್ಕಾರವಿದೆ. ಈ ಸಲ ಆದಷ್ಟು ಕೆಲಸ ಮಾಡುವ ನಿರೀಕ್ಷೆ ಇದೆ. ಗೌಡರು ಎರಡನೇ ಸಲ ಗೆದ್ದರೆ ಅವರದ್ದೇ ಸರ್ಕಾರ ಇರುವುದರಿಂದ ಹೆಚ್ಚಿನ ಕೆಲಸಗಳಾಗಬಹುದು ಎಂಬ ಭಾವನೆ ಮತದಾರರಲ್ಲೂ ಇದೆ. ನಾನು ವೃತ್ತಿಯಿಂದ ವೈದ್ಯ. ಶಿಕ್ಷಣ ಸಂಸ್ಥೆ ಕೂಡ ನಡೆಸುತ್ತಿದ್ದೇನೆ. ಎಲ್ಲ ಸಮಸ್ಯೆಗಳ ಅರಿವು ನನಗಿದೆ. ಏನು ಮಾಡಬೇಕು ಅನ್ನೋದು ಗೊತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT