ಹುಮನಾಬಾದ್: ತಾಲ್ಲೂಕಿನ ಘೋಡವಾಡಿ ಗ್ರಾಮದಲ್ಲಿ ಮಂಗವೊಂದು ಜನರ ಮೇಲೆ ದಾಳಿ ನಡೆಸಿ ಮೂವರನ್ನು ಗಾಯಗೊಳಿಸಿದೆ.
‘ಕಳೆದ ನಾಲ್ಕು ದಿನಗಳಿಂದ ಈ ಮಂಗ ಜನರಿಗೆ ಕಾಟ ಕೊಡುತ್ತಿದೆ. ಜನರನ್ನು ಬೆನ್ನಟ್ಟಿ ಅವರ ಮೇಲೆ ದಾಳಿ ಮಾಡುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ಏಕಾಏಕಿ ದಾಳಿ ಮಾಡಿ ಕಚ್ಚುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ ಕಾಳೆ ತಿಳಿಸಿದರು.
‘ಗ್ರಾಮದಲ್ಲಿ ಮಂಗಕ್ಕೆ ಹೆದರಿ ಜನ ಮನೆಗಳಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾರ್ಮಿಕರು ಮತ್ತು ರೈತರು ಹೊಲಗಳಿಗೆ ತೆರಳಲೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ಬೇಗ ಮಂಗ ಸೆರೆ ಹಿಡಿಯಬೇಕು’ ಎಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.
ಈ ಕುರಿತು ಅರಣ್ಯಾಧಿಕಾರಿ ಶಿವಕುಮಾರ್ ರಾಠೋಡ್ ಮಾತನಾಡಿ,‘ಅದು ಹುಚ್ಚು ಮಂಗ ಅಲ್ಲ. ದೇಹದ ಮೇಲೆ ಗಾಯಗಳಾಗಿವೆ. ಈ ರೀತಿ ವರ್ತನೆ ಮಾಡಿ ಜನರ ಮೇಲೆ ದಾಳಿ ಮಾಡುತ್ತಿದೆ. ಆದಷ್ಟು ಬೇಗ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತೇನೆ’ ಎಂದು ತಿಳಿಸಿದರು.