ಚಿಟಗುಪ್ಪ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಮೊಹರಂ ಆಚರಿಸಲಾಯಿತು.
ಮುಸ್ಲಿಂ ಸಮುದಾಯದವರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಕೆಲವರು ಪೀರ್ ಮೆರವಣಿಗೆ ನಡೆಸಿ, ಭಕ್ತಿ ಅರ್ಪಿಸಿದರು.
ರಸ್ತೆಗಳಲ್ಲಿ ಜಿಟಿ ಜಿಟಿ ಮಳೆಯಲ್ಲಿಯೇ ಯುವಕರು ಶರಬತ್ತು ವಿತರಣೆ ಮಾಡಿದರು.
ಹಿಂದಿನ ದಿನದ ಮಧ್ಯ ರಾತ್ರಿಯಿಂದಲೇ ಗ್ರಾಮಸ್ಥರು ಬುಲಾಯಿ ಹಾಡು ಹಾಡುತ್ತ ಪೀರ್ ಮೆರವಣಿಗೆಗೆ ಸಿದ್ಧತೆ ಮಾಡಿಕೊಂಡರು.
ತಾಲ್ಲೂಕಿನ ನಿರ್ಣಾ, ಮುತ್ತಂಗಿ, ತಾಳಮಡಗಿ, ನಾಗನಕೇರಾ, ಶಾಮತಾಬಾದ್, ಬನ್ನಳ್ಳಿ, ಮನ್ನಾಎಖ್ಖೇಳಿ, ಚಾಂಗಲೇರಾ, ಕರಕನಳ್ಳಿ, ಕುಡಂಬಲ, ಮೀನಕೇರಾ ಗ್ರಾಮಗಳಲ್ಲಿ ಮನೆಗಳ ಮುಂದೆ ಪೀರ್ ಮೆರವಣಿಗೆ ಬಂದಾಗ ಹಿಂದೂ–ಮುಸ್ಲಿಂ ಸಮುದಾಯದ ಜನರು ಬೆಲ್ಲ ಹಾಗೂ ಊದು ಬತ್ತಿ ಅರ್ಪಿಸಿದರು.
ನಿರ್ಣಾ ಮತ್ತು ಮುತ್ತಂಗಿ ಎರಡೂ ಗ್ರಾಮಗಳಲ್ಲಿಯ ಹುಸೇನ್ ಬಾಷಾ ಪೀರ್ಗಳು ದಿನಕ್ಕೆ ಒಬ್ಬರಂತೆ ಎರಡೂ ಗ್ರಾಮಗಳಿಗೆ ಮೆರವಣಿಗೆ ಮೂಲಕ ಹೋಗಿ ಅಲ್ಲಿಯ ಪೀರ್ಗಳಿಗೆ ನಮಿಸಿ ಗ್ರಾಮಗಳ ಭಾವೈಕ್ಯತೆ ಸಂದೇಶ ಸಾರಿದ್ದು ವಿಶೇಷವಾಗಿತ್ತು. ಚನ್ನಬಸಪ್ಪ ಪಾಟೀಲ, ಹಣಮಂತರಾವ್ ಪಾಟೀಲ, ಅಸದ್ ಪಟೇಲ್, ಬಾಬುರಾವ್ ಕುಲಕರ್ಣಿ, ಶೇಕ್ ಮೈನೋದ್ದೀನ್, ದಯಾನಂದ ಮುಕುಂದ ಬಾಯಿ ಹಾಗೂ ಚಂದ್ರಕಾಂತ ಬೈರನಳ್ಳಿ ಇದ್ದರು.