ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌ ಸುರಿದು ಯುವಕನ ಕೊಲೆ

Last Updated 29 ಡಿಸೆಂಬರ್ 2020, 14:34 IST
ಅಕ್ಷರ ಗಾತ್ರ

ಬೀದರ್: ಕಮಲನಗರ ತಾಲ್ಲೂಕಿನ ಕೊಟಗ್ಯಾಳ ಸಮೀಪದ ತೊಗರಿ ಹೊಲದಲ್ಲಿ ಸೋಮವಾರ ರಾತ್ರಿ ಯುವಕನ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ.

ಔರಾದ್‌ ತಾಲ್ಲೂಕಿನ ನಾಗಮಾರಪಳ್ಳಿಯ ಶಿವಕುಮಾರ ಹಾವಪ್ಪ (19) ಕೊಲೆಯಾದ ಯುವಕ. ತನ್ನ ಅಕ್ಕನನ್ನು ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ದೇವಣಿಯಲ್ಲಿರುವ ಭಾವನ ಮನೆಗೆ ಬಿಟ್ಟು ಮರಳಿ ಬೈಕ್‌ ಮೇಲೆ ನಾಗಮಾರಪಳ್ಳಿಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಅಕ್ಕನ ಮನೆಯಿಂದ ಸಂಜೆಯೇ ಹೊರಟಿದ್ದ ಶಿವಕುಮಾರ ತಡರಾತ್ರಿಯಾದರೂ ಮನೆಗೆ ಬಾರದಿದ್ದಾಗ ಅನುಮಾನಗೊಂಡ ಕುಟುಂಬದ ಸದಸ್ಯರು ಪೊಲೀಸರ ನೆರವಿನೊಂದಿಗೆ ಹುಡುಕಲು ಶುರು ಮಾಡಿದರು. ಮಾರ್ಗದಲ್ಲಿ ರಸ್ತೆ ಮೇಲೆಯೇ ಶಿವಕುಮಾರ ಒಯ್ದಿದ್ದ ಬೈಕ್‌ ನಿಂತಿತ್ತು. ಸಮೀಪದ ಹೊಲದಲ್ಲಿ ಹೋಗಿ ನೋಡಿದಾಗ ಸುಟ್ಟುಕರಕಲಾದ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.

‘ನನಗೆ ಒಬ್ಬನೇ ಮಗ. ಬೇರೆಯವರೊಂದಿಗೆ ಜಗಳ ಮಾಡುವ ಪ್ರವೃತ್ತಿ ಅವನದ್ದಾಗಿರಲಿಲ್ಲ. ಕೊಲೆಗೆ ಕಾರಣ ತಿಳಿದಿಲ್ಲ’ ಎಂದು ಯುವಕನ ತಾಯಿ ಅರುಣಾಬಾಯಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್, ಡಿವೈಎಸ್ಪಿ ದೇವರಾಜ್‌ ಬಿ. ಹಾಗೂ ಕಮಲನಗರ ಸಿಪಿಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಕಮಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT