ಹಮಿಲಾಪುರ (ಜನವಾಡ): ದಿ ಬುದ್ಧ ಯುತ್ ಕ್ಲಬ್ ಪದಾಧಿಕಾರಿಗಳು ತಾಲ್ಲೂಕಿನ ಹಮಿಲಾಪುರ ಗ್ರಾಮದಲ್ಲಿ ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ನೀರಿನ ತೊಟ್ಟಿಗೆ ಹೊಸ ರೂಪ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಗ್ರಾಮದ ಹನುಮಾನ ಮಂದಿರ ಸಮೀಪ ಇರುವ ಜಾನುವಾರುಗಳ ಕುಡಿಯುವ ನೀರಿನ ಹಳೆಯ ತೊಟ್ಟಿ ಪಾಚಿಗಟ್ಟಿತ್ತು. ಡಾ.ಅಂಬೇಡ್ಕರ್ ಜಯಂತಿಗೆ ಸಾಮಾಜಿಕ ಚಟುವಟಿಕೆ ಕೈಗೊಳ್ಳಬೇಕು ಎಂದು ಸಂಕಲ್ಪ ತೊಟ್ಟ ದಿ ಬುದ್ಧ ಯುತ್ ಕ್ಲಬ್ ಅಧ್ಯಕ್ಷ ಮಹೇಶ ರಾಂಪುರೆ ಹಾಗೂ ಪದಾಧಿಕಾರಿಗಳು ನೀರಿನ ತೊಟ್ಟಿ ಶುಚಿಗೊಳಿಸಿ, ಅದಕ್ಕೆ ಬಣ್ಣ ಬಳಿದಿದ್ದಾರೆ. ಸುತ್ತಮುತ್ತಲಿನ ಪರಿಸರವನ್ನೂ ಸ್ವಚ್ಛಗೊಳಿಸಿದ್ದಾರೆ.
‘ಬೇಸಿಗೆ ಕಾರಣ ಜಾನುವಾರುಗಳಿಗೆ ಹೆಚ್ಚು ನೀರಿನ ಅವಶ್ಯಕತೆ ಇರುತ್ತದೆ. ಮಾನವೀಯ ನೆಲೆಯಲ್ಲಿ ತೊಟ್ಟಿ ಶುಚಿಗೊಳಿಸಿ, ಅದಕ್ಕೆ ಬಣ್ಣ ಹಚ್ಚಿ ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಂಘದ ಪದಾಧಿಕಾರಿಗಳ ಕಾರ್ಯಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಧರ ಗೌಡ ಪ್ರೋತ್ಸಾಹಿಸಿದ್ದಾರೆ. ಗ್ರಾಮಸ್ಥರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಸಂತಸವಾಗಿದೆ’ ಎಂದು ಮಹೇಶ ರಾಂಪುರೆ ತಿಳಿಸಿದರು.
ಸಂಘದ ಕಿಶೋರ ರಾಂಪುರೆ, ಗೌತಮ, ಆಕಾಶ, ಅಶೋಕ ಶರ್ಮಾ, ರಾಹುಲ್, ಸತೀಶ್, ವೆಂಕಟೇಶ, ಕಾರ್ತಿಕ, ಸುನೀಲ್, ಮಾರುತಿ, ಸಮದ್, ದಾವಿದ್ ಅವರು ನೀರಿನ ತೊಟ್ಟಿ ಸ್ವಚ್ಛತೆ ಹಾಗೂ ನವೀಕರಣ ಕಾರ್ಯದಲ್ಲಿ ಭಾಗಿಯಾಗಿದ್ದರು.