ಬೀದರ್: ಇಲ್ಲಿನ ಸಿದ್ಧಾರ್ಥ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ ನಗರದ ಪಾಪನಾಶ ದೇವಸ್ಥಾನದಲ್ಲಿ ಮಂಗಳವಾರ ಆರಂಭಗೊಂಡಿತು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಸಿ.ಎಂ.ಶಹಾಬಾದಕರ್ ಉದ್ಘಾಟಿಸಿ, ವಿದ್ಯಾರ್ಥಿಗಳು ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದಾರೆ. ಅದು ಕಡಿಮೆಯಾಗಬೇಕು. ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಉನ್ನತವಾದ ಮೌಲ್ಯ ಬೆಳೆಸಿಕೊಂಡು ಜೀವನ ನಡೆಸಲು ಸಲಹೆ, ಮಾರ್ಗದರ್ಶನ ಪಡೆಯಬೇಕು ಎಂದರು.
ಹನುಮಾನ ಮಂದಿರ ದೇವಸ್ಥಾನದ ಅಧ್ಯಕ್ಷ ಅಶೋಕ ಪಾಟೀಲ, ಪ್ರಮುಖರಾದ ವಿಜಯಕುಮಾರ ಗುನಳ್ಳಿಕರ ಮಾತನಾಡಿ, ಇಂತಹ ಶಿಬಿರಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನವಾಗುತ್ತದೆ. ಭವಿಷ್ಯಕ್ಕೆ ಭದ್ರ ಅಡಿಪಾಯ ಸಿಗುತ್ತದೆ ಎಂದು ತಿಳಿಸಿದರು.
ಪ್ರಾಚಾರ್ಯ ಎಸ್.ಪ್ರಭು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಸ್ವಚ್ಛತೆ, ಸಹಬಾಳ್ವೆ ಮತ್ತು ಸಹೋದರ ಮನೋಭಾವ ಬೆಳೆಸಿಕೊಳ್ಳಬೇಕು. ಯಾವುದೇ ರಾಷ್ಟ್ರ ಅಭಿವೃದ್ಧಿ ಆಗಬೇಕಾದರೆ ಆ ರಾಷ್ಟ್ರದ ವಿದ್ಯಾರ್ಥಿಗಳಿಂದ ಸಾಧ್ಯ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ನಸಿರೊದ್ದೀನ್, ಉಪನ್ಯಾಸಕರಾದ ಸುಲೋಚನಾ ಬಿರಾದಾರ, ಏಕನಾಥ ಸುಣಗಾರ, ಕೈಲಾಶಪತಿ, ನಾಗಗೊಂಡ, ನಾಗಪ್ಪ, ಲಕ್ಷ್ಮಿ, ಅಕೀಬ್ ಜಾವೇದ್, ಚಂದ್ರಕಾಂತ ಹಾಜರಿದ್ದರು.