ಬೀದರ್: ಆನ್ಲೈನ್ ವಂಚನೆ ಪತ್ತೆ ಹಚ್ಚುವುದು ಮತ್ತು ತಡೆಗಟ್ಟುವುದರ ಬಗ್ಗೆ ಬೀದರ್ ಡಿಸಿಸಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಿಗೆ ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಸೋಮವಾರ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಮರಕುಮಾರ್ ಖಂಡ್ರೆ ಉದ್ಘಾಟಿಸಿ, ರಾಜ್ಯದಲ್ಲಿ 3ನೇ ಅತಿ ಹೆಚ್ಚು, 9 ಲಕ್ಷ ಉಳಿತಾಯ ಖಾತೆಗಳನ್ನು ಡಿಸಿಸಿ ಸಹಕಾರಿ ಬ್ಯಾಂಕು ಹೊಂದಿದೆ. ಉತ್ತಮ ಸೇವೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳಬೇಕು. ಗ್ರಾಹಕರಿಗೆ ತೊಂದರೆಯಾಗದ ರೀತಿಯಲ್ಲಿ ಸೇವೆಗಳನ್ನು ನೀಡಬೇಕು ಎಂದು ತಿಳಿಸಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕಿನ ಅಲೀಮ್ ಮಾತನಾಡಿ, ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿವೆ. ಪಾಸ್ವರ್ಡ್ಗಳನ್ನು ಯಾವುದೇ ಕಾರಣಕ್ಕೂ ಬೇರೆಯವರ ಜೊತೆಗೆ ಹಂಚಿಕೊಳ್ಳಬಾರದು. ಬ್ಯಾಂಕಿನ ಸಿಬ್ಬಂದಿ ಕಂಪ್ಯೂಟರ್ ಪಾಸ್ವರ್ಡ್ ಯಾರೊಂದಿಗೂ ವಿನಿಮಯ ಮಾಡಿಕೊಳ್ಳಬಾರದು. ಯಾರಾದರೂ ವಂಚನೆಗೆ ಒಳಗಾದರೆ ತಕ್ಷಣವೇ ಅವರ ಖಾತೆ ಬ್ಲಾಕ್ ಮಾಡಬೇಕು. ಅನಗತ್ಯ ಕರೆ, ಒಟಿಪಿಗಳಿಗೆ ಪ್ರತಿಕ್ರಿಯಿಸಬಾರದು ಎಂದು ಹೇಳಿದರು.
ಡಿಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ವಿಠಲ ರೆಡ್ಡಿ ಮಾತನಾಡಿ, ಹಣಕಾಸಿನ ವ್ಯವಹಾರದಲ್ಲಿ ವಿಶ್ವಾಸ ಮತ್ತು ನಂಬಿಕೆ ಮುಖ್ಯವಾದುದು. ಗ್ರಾಹಕರ ಮತ್ತು ಸಿಬ್ಬಂದಿ ನಡುವೆ ನಂಬಿಕೆ ಉಳಿಯಬೇಕಾದರೆ ಸಮಯಕ್ಕೆ ಸರಿಯಾಗಿ ಕೆಲಸವಾಗಬೇಕು ಎಂದರು.
ಉಪ ಪ್ರಧಾನ ವ್ಯವಸ್ಥಾಪಕ ದೀನದಯಾಳ ಮನ್ನಳ್ಳಿ, ರಾಜಶೇಖರಯ್ಯ, ಸಹಾಯಕ ವ್ಯವಸ್ಥಾಪಕ ನರೇಂದ್ರ, ಶ್ರೀಧರ ಕುಲಕರ್ಣಿ, ಸಹಾರ್ದ ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು, ಉಪನ್ಯಾಸಕ ಮಂಜುನಾಥ ಭಾಗವತ, ಎಸ್.ಜಿ. ಪಾಟೀಲ, ಅನಿಲಕುಮಾರ, ಮಹಾಲಿಂಗಪ್ಪ ಇತರರಿದ್ದರು.