ಬೀದರ್: ‘ಮಕ್ಕಳು ಉಪದೇಶಕ್ಕಿಂತ ಪಾಲಕರ ಆಚರಣೆಯನ್ನು ಅನುಕರಿಸುತ್ತಾರೆ. ಮಕ್ಕಳಲ್ಲಿ ಬದಲಾವಣೆ ಕಾಣುವ ಮೊದಲು ಪಾಲಕರು ಬದಲಾಗಬೇಕು’ ಎಂದು ಚಿಂತಕಿ ಲೀಲಾ ಕಾರಟಗಿ ಸಲಹೆ ನೀಡಿದರು.
ಇಲ್ಲಿಯ ಬಿ.ವಿ.ಬಿ.ಕಾಲೇಜು ಆವರಣದಲ್ಲಿ ಬಸವ ಕೇಂದ್ರದ ವತಿಯಿಂದ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಶನಿವಾರ ‘ಮಕ್ಕಳ ಸಾತ್ವಿಕ ಬೆಳವಣಿಗೆ– ಪಾಲಕರ ಜವಾಬ್ದಾರಿ’ ಕುರಿತ ಸಂಸ್ಕೃತಿ ಚಿಂತನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪಾಲಕರು ಆದರ್ಶದ ಬದುಕು ಕಟ್ಟಿಕೊಂಡರೆ ಮಕ್ಕಳು ಸಹಜವಾಗಿ ಆದರ್ಶದ ಮಾರ್ಗದಲ್ಲಿ ಸಾಗುತ್ತಾರೆ. ಮಕ್ಕಳು ಎಂಥವರ ಸಹವಾಸದಲ್ಲಿದ್ದಾರೆ ಎನ್ನುವುದರ ಮೇಲೆ ನಿಗಾ ಇಡಬೇಕು. ಉತ್ತಮ ಸಂಸ್ಕಾರ ನೀಡುವ ಮೂಲಕ ಅವರ ಭವಿಷ್ಯ ರೂಪಿಸಬೇಕು’ ಎಂದು ಹೇಳಿದರು.
‘ಪಾಲಕರು ನೈತಿಕ ಮಾರ್ಗದಲ್ಲಿ ಸಾಗದಿದ್ದರೆ ಮಕ್ಕಳು ನೈತಿಕ ಬೆಳವಣಿಗೆಯ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗದು. ಶಿಕ್ಷಣದ ಪ್ರಮಾಣಪತ್ರ ಕೊಡುವ ಕಾಲೇಜುಗಳು ಇವೆ. ಮನುಷ್ಯತ್ವ ಹೇಳಿಕೊಡುವ ಕಾಲೇಜುಗಳು ಅಸ್ತಿತ್ವಕ್ಕೆ ಬಂದಿಲ್ಲ. ಶ್ರೇಷ್ಠ ಸಂಸ್ಕಾರ ಇರುವ ದೇಶದಲ್ಲಿ ಪಾಲಕರ ಹೊಣೆ ಅಧಿಕ ಇದೆ’ ಎಂದು ತಿಳಿಸಿದರು.
‘ವಿದ್ಯೆ ಭರವಸೆಯ ಬೆಳಕಾಗಬೇಕು. ಉತ್ತಮ ಸಂಸ್ಕಾರ ನೀಡುವ ಮೂಲಕ ಮಕ್ಕಳಲ್ಲಿ ಭರವಸೆ ಮೂಡಿಸಬೇಕು’ ಎಂದು ಹೇಳಿದರು.