ಬೀದರ್: ಉಚಿತ ಆಮ್ಲಜನಕಕ್ಕೆ ಪ್ರತಿಯೊಬ್ಬರೂ ಸಸಿ ನೆಡಬೇಕು ಎಂದು ಅಖಿಲ ಭಾರತ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ವೀರಭದ್ರಪ್ಪ ಉಪ್ಪಿನ್ ಹೇಳಿದರು.
ನಗರದ ವೈದಿಕ ಕಾಲೊನಿಯಲ್ಲಿ ಬರೀದ್ಶಾಹಿ ಯೋಗ ತಂಡದ ವತಿಯಿಂದ ನಡೆದ ಸಸಿ ವಿತರಣೆ, ನೆಡುವಿಕೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಅನೇಕರು ಆಮ್ಲಜನಕ ಕೊರತೆಯಿಂದ ಪ್ರಾಣ ಕಳೆದುಕೊಂಡರು. ಗಿಡಮರಗಳು ಉಚಿತವಾಗಿ ಆಮ್ಲಜನಕ ಕೊಡುತ್ತಿದ್ದರೂ ಸ್ವಾರ್ಥಕ್ಕೆ ಬೆನ್ನು ಬಿದ್ದು ಕಾಡು ನಾಶ ಮಾಡುತ್ತಿದ್ದೇವೆ. ಆಮ್ಲಜನಕ ಕೊರತೆ ಅದರ ಪರಿಣಾಮವೇ ಆಗಿದೆ ಎಂದು ತಿಳಿಸಿದರು.
ಆಮ್ಲಜನಕ ನೀಡುವ ಅಕೇಸಿಯಾ, ಪಾಮ್, ಅಲೋವಿರಾ ಮೊದಲಾದ ಗಿಡಗಳನ್ನು ಮನೆ ಆವರಣದಲ್ಲಿ ನೆಡಬೇಕು ಎಂದು ಯೋಗ ಕೇಂದ್ರದ ಮೇಲ್ವಿಚಾರಕ ಗಂಗಪ್ಪ ಸಾವಳೆ ಹೇಳಿದರು.