ಬೀದರ್: ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಆವಾಸ್ ಪ್ಲಸ್ ದತ್ತಾಂಶದಲ್ಲಿ ಮಾಹಿತಿ ಸೇರ್ಪಡೆಗೆ ಅನುಮತಿ ನೀಡಿರುವ ಕಾರಣ ಜಿಲ್ಲೆಯ 93,594 ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
89,232 ವಸತಿ ರಹಿತರು ಹಾಗೂ 4,362 ನಿವೇಶನ ರಹಿತರು ಇದರಲ್ಲಿ ಸೇರಿದ್ದಾರೆ ಎಂದು ಹೇಳಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಕೆಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆ ಜಾರಿಗೊಳಿಸಿದೆ ಎಂದು ತಿಳಿಸಿದ್ದಾರೆ.
2018 ರಲ್ಲಿ ಸರ್ಕಾರ ಪ್ರತಿ ಗ್ರಾಮಗಳಲ್ಲಿನ ಸೂರು ಇಲ್ಲದವರ ಮಾಹಿತಿಯನ್ನು ಆವಾಸ್ ಪ್ಲಸ್ ದತ್ತಾಂಶದಲ್ಲಿ ಸೇರಿಸಲು ಸೂಚಿಸಿತ್ತು. ಆದರೆ, ಹಿಂದಿನ ಕಾಂಗ್ರೆಸ್ ಸರ್ಕಾರದ ಎಡವಟ್ಟಿನಿಂದ ರಾಜ್ಯದ ಬಹಳಷ್ಟು ವಸತಿ ರಹಿತರು ಹಾಗೂ ನಿವೇಶನ ರಹಿತರ ಮಾಹಿತಿ ಆವಾಸ್ ಪ್ಲಸ್ ದತ್ತಾಂಶದಲ್ಲಿ ನಮೂದು ಆಗಿರಲಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ರಾಜ್ಯದ 18,78,671 ವಸತಿ ರಹಿತರು ಹಾಗೂ 6,61,535 ನಿವೇಶನ ರಹಿತರ ಮಾಹಿತಿಯನ್ನು ಆವಾಸ್ ಪ್ಲಸ್ ದತ್ತಾಂಶದಲ್ಲಿ ಸೇರ್ಪಡೆಗೆ ಅನುಮತಿ ನೀಡುವ ಮೂಲಕ ಅವರಿಗೆ ಸಂಕ್ರಾಂತಿ ಕೊಡುಗೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.