ಔರಾದ್: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಶಶಿಕಾಂತ ಬಿ.ಭಾವಿಕಟ್ಟಿ ಸಸಿಗಳಿಗೆ ನೀರು ಹಾಕಿದರು.
'ಸಸಿಗಳನ್ನು ಮಕ್ಕಳಂತೆ ಪೋಷಿಸಬೇಕು. ಮನುಷ್ಯ ಪರಿಸರ ರಕ್ಷಣೆ ಮಾಡಿದರೆ ಪರಿಸರ ಮನುಷ್ಯನನ್ನು ಕಾಪಾಡುತ್ತದೆ' ಎಂದು ಹೇಳಿದರು.
ನ್ಯಾಯಾಧೀಶ ಮಲ್ಲಿಕಾರ್ಜುನ ಮಾತನಾಡಿ, 'ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು. ತಮ್ಮ ಮನೆಗಳ ಮುಂದೆ ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು' ಎಂದು ಸಲಹೆ ನೀಡಿದರು.
ವಲಯ ಅರಣ್ಯಾಧಿಕಾರಿ ಪ್ರೇಮಶೇಖರ ಚಾಂದೋರಿ ಮಾತನಾಡಿ, 'ಈ ವರ್ಷ ತಾಲ್ಲೂಕಿನಲ್ಲಿ 2 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ. ಔರಾದ್ ಪಟ್ಟಣದಲ್ಲಿ 1,800 ಸಸಿಗಳನ್ನು ನೆಡಲಾಗುತ್ತದೆ' ಎಂದರು.
'ಸಸಿಗಳನ್ನು ನೆಟ್ಟು ಪೋಷಣೆ ಮಾಡುವುದು ಹಾಗೂ ಅರಣ್ಯ ರಕ್ಷಣೆ ನಮ್ಮ ಇಲಾಖೆ ಜವಾಬ್ದಾರಿ. ಒತ್ತುವರಿಯಾದ ಅರಣ್ಯ ಭೂಮಿ ತೆರವು ಮಾಡಿ ಅಲ್ಲಿ ಮರಗಳು ಬೆಳೆಸುವುದು. ರಸ್ತೆ ಪಕ್ಕದಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳು ಬೆಳೆಸುತ್ತೇವೆ' ಎಂದು ಅವರು ಹೇಳಿದರು.
'ನಮ್ಮ ತಾಲ್ಲೂಕಿನಲ್ಲಿ ಬೇವು, ಮಾವು, ಶ್ರೀಗಂಧ, ಹೆಬ್ಬೇವು ಸೇರಿದಂತೆ 12 ಪ್ರಕಾರದ ಸಸಿಗಳು ನೆಡುತ್ತೇವೆ' ಎಂದರು.