ಬೀದರ್: ‘ದೇಸಿ ಗೋತಳಿಗಳ ರಕ್ಷಣೆಗೆ ಕೃಷಿಕರು ಮುಂದಾಗಬೇಕು. ಗೋಶಾಲೆಗಳ ಮೂಲಕ ಈ ಪ್ರಯತ್ನ ಮುಂದುವರಿಯಬೇಕು’ ಎಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಡಿ. ನಾರಾಯಣಸ್ವಾಮಿ ಹೇಳಿದರು.
ವೈಷ್ಣೋದೇವಿ ಸಾಂಸ್ಕೃತಿಕ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ನೌಬಾದ್ ಸಮೀಪದ ಜ್ಞಾನ ಶಿವಯೋಗಾಶ್ರಮದಲ್ಲಿ ನಿರ್ಮಿಸಿದ ಶ್ರೀಮಾತೇಶ್ವರಿ ಗೋಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದಿನ ತಾಂತ್ರಿಕ ಜೀವನದಲ್ಲಿ ಸಂಸ್ಕಾರವನ್ನು ಮರೆಯುತ್ತಿದ್ದೇವೆ. ಆದರೆ, ಪಾರಂಪರಿಕ ಗೋಸಂತತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಗಮೇಶ ಬಿರಾದಾರ ಅವರು ಗೋಶಾಲೆ ಆರಂಭಿಸಿರುವುದು ಶ್ಲಾಘನೀಯ’ ಎಂದು ತಿಳಿಸಿದರು.
ಬೇಮಳಖೇಡ ಗೋರ್ಟಾದ ಹಿರೇಮಠ ಸಂಸ್ಥಾನದ ರಾಜಶೇಖರ ಶಿವಾಚಾರ್ಯರು ಮಾತನಾಡಿ, ‘ಸಂಗಮೇಶ ಬಿರಾದಾರ ಅವರ ನಿಸ್ವಾರ್ಥದಿಂದ ಗೋಶಾಲೆ ಆರಂಭವಾಗಿದೆ. ಇಂತಹ ಸಾಮಾಜಿಕ ಪುಣ್ಯದ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವುದು ಅವಶ್ಯಕವಾಗಿದೆ’ ಎಂದರು.
ವೈಷ್ಣೋದೇವಿ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ ಮಾತನಾಡಿ, ‘50 ಗೋವುಗಳ ಸಾಕಣಿಕೆಗೆ ಶೆಡ್ ನಿರ್ಮಾಣ ಮಾಡಲಾಗಿದೆ’ ಎಂದು ತಿಳಿಸಿದರು.
ಕೇಂದ್ರ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿದರು. ಮಾತೆ ಕರುಣಾದೇವಿ ಸಾನಿಧ್ಯ ವಹಿಸಿದ್ದರು. ಅತಿಥಿಯಾಗಿ ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ರವೀಂದ್ರಕುಮಾರ ಭೂರೆ ಪಾಲ್ಗೊಂಡಿದ್ದರು.
ಸಂಜೀವಕುಮಾರ ಸ್ವಾಮಿ ಕಂದಗೂಳ, ಮಲ್ಲಿಕಾರ್ಜುನ ನಾಗಮಾರಪಳ್ಳಿ, ಮಲ್ಲಯ್ಯ ಸ್ವಾಮಿ ಐನೂಳ್ಳಿ, ಶಿವಕುಮಾರ ಪಾಂಚಾಳ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ಜರುಗಿತು.