ಚಿಟಗುಪ್ಪ: ‘ದೈವಿ ಪುರುಷನಾದ ರಾಮನ ಬದುಕಿನ ಆದರ್ಶಗಳು ಎಲ್ಲ ಧರ್ಮದ ಯುವಜನರಿಗೆ ಸ್ಫೂರ್ತಿ’ ಎಂದು ತಡೋಳಾದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರಾಮನವಮಿ ಪ್ರಯುಕ್ತ ಇಲ್ಲಿಯ ಹನುಮಾನ ಮಂದಿರದಲ್ಲಿ ಜೈಶ್ರೀರಾಮ ಸೇನಾ ಸಂಘಟನೆಯ ಪದಾಧಿಕಾರಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಮ ವನವಾಸಕ್ಕೆ ತೆರಳಿದಾಗ ಪತ್ನಿ ಸೀತೆಯೂ ಜೊತೆಯಾಗಿ ಹೋಗುವ ಸನ್ನಿವೇಶ ಎಲ್ಲ ದಂಪತಿಗೆ ಮಾರ್ಗದರ್ಶಿ ಆಗಿದೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದಾಗಲೂ ಪತಿ- ಪತ್ನಿ ಕೈಜೋಡಿಸಿ ಸಂಸಾರದ ನೌಕೆ ಸಾಗಿಸಬೇಕು ಎಂಬ ಅಮೂಲ್ಯ ಸಂದೇಶ ಅದು ಸಾರುತ್ತದೆ ಎಂದರು.
ಜಯಂತಿಗಳು ಮೆರವಣಿಗೆ ಮಾಡುವುದರಿಂದ ಸಾರ್ಥಕ ಆಗುವುದಿಲ್ಲ. ಬದಲಿಗೆ ಮಹನೀಯರ ಆದರ್ಶಗಳನ್ನು ಬದುಕಿನಲ್ಲಿ ಆಚರಣೆಗೆ ತಂದಾಗ ಮಾತ್ರ ಅರ್ಥ ಬರುತ್ತದೆ ಎಂದು ಹೇಳಿದರು.
ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲರೂ ರಾಮಾಯಣ ನಿತ್ಯ ಪಠಿಸಬೇಕು. ಅದರಲ್ಲಿನ ಮಾನವೀಯ ಮೌಲ್ಯಗಳನ್ನು ಎಲ್ಲರೂ ಪಾಲಿಸಬೇಕು’ ಎಂದರು.
ಮುಖಂಡರಾದ ದತ್ತು, ಮಲ್ಲಿಕಾರ್ಜುನ ಪಾಟೀಲ, ಪ್ರವೀಣ, ರಾಜಗೋಪಾಲ್, ಬಸವರಾಜ್ ಇದ್ದರು.
ಸಚಿನ ಮಠಪತಿ ನಿರೂಪಿಸಿದರು. ಅನಿಲ ಸಿಂಧೆ ವಂದಿಸಿದರು. ಬೆಳಿಗ್ಗೆ ದೇಗುಲದಲ್ಲಿ ಮಹಿಳೆಯರು ರಾಮನ ತೊಟ್ಟಿಲು ಕಾರ್ಯಕ್ರಮ ನಡೆಸಿದರು.