ಚಿಟಗುಪ್ಪ: ಈ ಬಾರಿಯ ಶ್ರಾವಣ ಮಾಸದ ಭಕ್ತರ ಭಕ್ತಿ ಸೇವೆಗೆ ಕೊರೊನಾ ಅಡ್ಡಿಯಾಗಿದೆ.
ತಾಲ್ಲೂಕಿನ ಸುಕ್ಷೇತ್ರ ರಾಮಪುರ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಪೂಜೆ, ಅಭಿಷೇಕ, ಧಾರ್ಮಿಕ ಕ್ರಿಯೆಗಳು, ಸಪ್ತಾಹ ಭಜನೆ, ಪುಣ್ಯ ಸ್ನಾನ, ದೇವರ ಪಲ್ಲಕ್ಕಿ ಉತ್ಸವಕ್ಕೆ ಅವಕಾಶ ಕೊಟ್ಟಿಲ್ಲ. ಇದರಿಂದ ಭಕ್ತರಿಗೆ ನಿರಾಸೆಯಾಗಿದೆ.
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಕ್ಷೇತ್ರಕ್ಕೆ 10 ಸಾವಿರದಿಂದ 50 ಸಾವಿರ ದವರೆಗೂ ಭಕ್ತರು ಭೇಟಿ ನೀಡುತ್ತಿದ್ದರು. ದೇಗುಲದ ಪುಷ್ಕರಣಿಯಲ್ಲಿ ಪುಣ್ಯಸ್ನಾನ ಮಾಡಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದರು. ಒಂದು ವಾರದವರೆಗೆ ನಿರಂತರವಾಗಿ ಸಪ್ತಾಹ ಭಜನೆ ನಡೆಯುತ್ತಿತ್ತು.
ಸುತ್ತಲಿನ ಗ್ರಾಮಗಳಾದ ವಳಖಿಂಡಿ, ಇಟಗಾ, ಕುಡಂಬಲ್, ಮುಸ್ತರಿ ಇತರೆಡೆಗಳಿಂದ ಭಜನಾ ಮೇಳ ತಂಡಗಳು ದೇಗುಲಕ್ಕೆ ಬಂದು ತಮ್ಮ ಭಜನೆಯ ಸರದಿಗಾಗಿ ಎರಡು-ಮೂರು ದಿನಗಳ ವರೆಗೂ ಕಾಯುತ್ತಿದ್ದರು. ಈ ವರ್ಷ ಯಾವುದೇ ಭಜನೆ ಸಪ್ತಾಹ ಕಾರ್ಯಕ್ರಮವಿಲ್ಲ.
‘ದೇಗುಲಕ್ಕೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಅಂತರ ಕಾಯ್ದುಕೊಂಡು ದರ್ಶನ ಪಡೆಯಬಹುದು. ನೈವೇದ್ಯ ಅರ್ಪಣೆ ಮಾಡುವಂತಿಲ್ಲ’ ಎಂದು ದೇಗುಲದ ಕಾರ್ಯದರ್ಶಿ ಜಗದೀಶ್ ಮೂಲಗೆ ತಿಳಿಸಿದ್ದಾರೆ.
ದೇಗುಲದಲ್ಲಿ ಶ್ರಾವಣದಲ್ಲಿ ನಿತ್ಯ ದೇವರಿಗೆ ಬಿಲ್ವಾರ್ಚನೆ ಪೂಜೆ ನಡೆಸಿ ಸಂಜೆ ದೇಗುಲದ ಸುತ್ತ ಪಲ್ಲಕ್ಕಿ ಉತ್ಸವ ನಡೆಯುತ್ತಿತ್ತು. ಈ ಬಾರಿ ಉತ್ಸವ ನಿಲ್ಲಿಸಲಾಗಿದೆ.
‘ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶ್ರಾವಣ ಮಾಸವನ್ನು ಎಲ್ಲರೂ ಮನೆಯಲ್ಲೇ ಆಚರಿಸಬೇಕು. ನಿತ್ಯ ಶಿವನಾಮ ಜಪ ಮಾಡಬೇಕು. ದೇವರ ಆರಾಧನೆ ಹಾಗೂ ಬಿಲ್ವ ಪತ್ರೆಯಿಂದ ಪೂಜೆ ಮಾಡಬೇಕು. ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿ ಸೋಮವಾರ ಲಘು ಆಹಾರ ಸೇವಿಸಿ, ಆರೋಗ್ಯ ವೃದ್ಧಿ ಪಡಿಸಿಕೊಳ್ಳಬೇಕು’ ಎಂದು ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.