ಬೀದರ್: ಕಾರಂಜಾ ಅಚ್ಚುಕಟ್ಟು ಪ್ರದೇಶದ ಇನ್ನೂ ಸ್ವಾಧೀನಪಡಿಸಿಕೊಳ್ಳದ ಎರಡು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬಿನಲ್ಲಿ ನಿಂತಿರುವ ನೀರು ಖಾಲಿ ಮಾಡಿಸಲು ಒತ್ತಾಯಿಸಿ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ಆರಂಭಿಸಿತು.
ಜಲಾಶಯದ ನಿಂತ ನೀರಿನಿಂದಾಗಿ ಅರ್ಧದಷ್ಟು ಕಬ್ಬು ಹಾಳಾಗಿದೆ. ನೀರು ಖಾಲಿ ಮಾಡದಿದ್ದರೆ ಉಳಿದ ಕಬ್ಬು ಕೂಡ ರೈತರ ಕೈಗೆ ಬರದು. ಸಕ್ಕರೆ ಕಾರ್ಖಾನೆಗಳು 15 ದಿನಗಳಲ್ಲಿ ಪ್ರಸಕ್ತ ವರ್ಷದ ಕಬ್ಬು ನುರಿಸುವ ಹಂಗಾಮು ಕೊನೆಗೊಳಿಸುವ ಸಾಧ್ಯತೆ ಇರುವ ಕಾರಣ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೂಚಕನಳ್ಳಿ ಹೇಳಿದರು.
ಕಬ್ಬು ಕಟಾವಿಗೆ ಅನುಕೂಲವಾಗುವಂತೆ ಕೂಡಲೇ ನೀರು ಖಾಲಿ ಮಾಡಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ರೈತರೇ ಕಾರಂಜಾ ಜಲಾಯಶದ ನೀರು ಖಾಲಿ ಮಾಡುವುದು ಕೂಡ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.