ಬೀದರ್: ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಸೇವಾ ನಗರ ತಾಂಡ ಸಮೀಪ ರಾಷ್ಟ್ರಿಯ ಹೆದ್ದಾರಿ 50ರಲ್ಲಿ ಲಾರಿ ಹಾಗೂ ಪಿಕಪ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಾರಾಷ್ಟ್ರದ ಮೂವರು, ತೆಲಂಗಾಣದ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ಉದಗೀರ್ನ ದಸ್ತಗೀರ್ ದವಳಸಾಬ್, ರಶೀದಾ ಮೊಹಮ್ಮದ್ ಶೇಕ್ ಹಾಗೂ ಅಮಾಹಮ್ ಶೇಕ್, ಹೈದರಾಬಾದಿನ, ಪಿಕಪ್ ವಾಹನ ಚಾಲಕ ವಲಿ ಮೃತರು. ಹತ್ತು ಜನ ಗಾಯಾಳುಗಳನ್ನು ನಗರದ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಬ್ರಿಮ್ಸ್) ದಾಖಲಿಸಲಾಗಿದೆ.
‘ಅಶೋಕ್ ಲೇಲ್ಯಾಂಡ್ ಪಿಕಪ್ ವಾಹನವು ಉದಗೀರ್ನಿಂದ ಹೈದರಾಬಾದ್ಗೆ ತೆರಳುತ್ತಿತ್ತು. ಎನ್ಎಸ್ಎಸ್ಕೆ ಸಕ್ಕರೆ ಕಾರ್ಖಾನೆಗೆ ಸೇರಿದ ಲಾರಿ ನಡುವೆ ಸೇವಾನಗರ ತಾಂಡ ಸಮೀಪ ಡಿಕ್ಕಿ ಸಂಭವಿಸಿದೆ. ಬುಧವಾರ ಬೆಳಗಿನ ಜಾವ 4.30ರ ಸುಮಾರಿಗೆ ಘಟನೆ ನಡೆದಿದೆ. ಮೃತರು ಹೈದರಾಬಾದಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಉದಗೀರ್ನಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಹೈದರಾಬಾದ್ಗೆ ಮರಳುವಾಗ ಈ ಘಟನೆ ಸಂಭವಿಸಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ತಿಳಿಸಿದ್ದಾರೆ.
ಪಿಕಪ್ ವಾಹನದಲ್ಲಿ ಆರು ಜನ ಪುರುಷರು, ಐದು ಜನ ಮಹಿಳೆಯರು ಹಾಗೂ ಮೂವರು ಮಕ್ಕಳು ಸಂಚರಿಸುತ್ತಿದ್ದರು. ಮೂವರು ಪುರುಷರು ಹಾಗೂ ಒಬ್ಬ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಗಾಯಾಳುಗಳನ್ನು ಬ್ರಿಮ್ಸ್ಗೆ ದಾಖಲಿಸಲಾಗಿದೆ. ಲಾರಿ ಚಾಲಕ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದೇ ಘಟನೆಗೆ ಕಾರಣ ಎಂಬುದು ತಿಳಿದು ಬಂದಿದೆ’ ಎಂದು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘನ್ಣನವರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.