ಕಮಲನಗರ: ಮನುಷ್ಯನ ದೈನಂದಿನ ಬದುಕಿನಲ್ಲಿ ಅವಿಭಾಜ್ಯ ಅಂಗವಾದ ವಿಜ್ಞಾನ ಮತ್ತು ತಂತ್ರಜ್ಞಾನದ ಅವಿಷ್ಕಾರಗಳು ಎಲ್ಲವನ್ನೂ ಸಾಧ್ಯವಾಗಿಸಿವೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವೀರಕುಮಾರ ಮಂಠಾಳಕರ್ ಹೇಳಿದರು.
ತಾಲ್ಲೂಕಿನ ಠಾಣಾಕುಶನೂರು ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಭಾವ-ಜೀವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ಸರ್ಕಾರ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಮಕ್ಕಳಿಗೆ ವಿಜ್ಞಾನ ಅತ್ಯಂತ ಕುತೂಹಲದ ವಿಷಯವಾಗಿದ್ದು, ಪ್ರತಿಯೊಂದನ್ನು ಕಾರಣ ಕೇಳಿಯೇ ತಿಳಿದುಕೊಳ್ಳುವ ಹಂಬಲ ಅವರಿಗೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚೆಚ್ಚು ಅಧ್ಯಯನ ಮಾಡಿ ತಿಳಿಸಿಕೊಡಬೇಕು ಎಂದರು.
ಮುಖ್ಯಶಿಕ್ಷಕ ಮಂಜುನಾಥ ನಾಯಕ ಮಾತನಾಡಿ,‘ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದೇ ಈ ಹಬ್ಬದ ಉದ್ದೇಶ. ಹೊಸ ಅವಿಷ್ಕಾರಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು’ ಎಂದರು.
ಸಂಪನ್ಮೂಲ ವ್ಯಕ್ತಿ ಸಂಗಣ್ಣ ದೇಗಲಮಡಿ ಮಾತನಾಡಿದರು.ಸಂಪನ್ಮೂಲ ಶಿಕ್ಷಕಿ ಸುನಂದಾ, ವರ್ಷಾರಾಣಿ, ಪ್ರಭಾವತಿ ಕದಂ, ಶಿವಲೀಲಾ, ಜ್ಯೋತಿ, ಡಿ.ಬಿ.ಮಸ್ಕಲೆ, ಮತ್ತಣ್ಣ ರಂಡೈಆಳೆ, ಸಂಗಣ್ಣ ಹೂಗಾರ, ರಮ್ಯ ದತ್ತಾತ್ರಿ ಮಸ್ಕಲೆ ಹಾಗೂ ನಾಗರಾಜ ದುರ್ಗಣ್ಣನವರ್ ಇದ್ದರು.