ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಬಗ್ಗೆ ಮಾತನಾಡುವ ಅಧಿಕಾರ ಶಿವರಾಜ ಪಾಟೀಲಗೆ ಇಲ್ಲ: ಬಸವರಾಜ ಧನ್ನೂರ ತಿರುಗೇಟು

Last Updated 26 ಏಪ್ರಿಲ್ 2022, 15:36 IST
ಅಕ್ಷರ ಗಾತ್ರ

ಬೀದರ್: ಬಸವ ಧರ್ಮ ಪೀಠದ ಅಂಗ ಸಂಸ್ಥೆಗಳಿಂದ ಉಚ್ಚಾಟನೆಗೊಂಡಿರುವ ಶಿವರಾಜ ಪಾಟೀಲ ಅತಿವಾಳ ಅವರಿಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ಅಧಿಕಾರ ಇಲ್ಲ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ತಿರುಗೇಟು ನೀಡಿದ್ದಾರೆ.

ಬಸವ ಸೇವಾ ಪ್ರತಿಷ್ಠಾನದ ವಿವಾದಕ್ಕೆ ಸಂಬಂಧಿಸಿದ ನನ್ನ ಹೇಳಿಕೆಯನ್ನು ಉಲ್ಲೇಖಿಸಿ, ಪ್ರತಿಷ್ಠಾನದ ವಿವಾದಕ್ಕೂ- ರಾಷ್ಟ್ರೀಯ ಬಸವ ದಳಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅವರು ನೀಡಿರುವ ಹೇಳಿಕೆ ಹಾಸ್ಯಾಸ್ಪದ ಎಂದು ಹೇಳಿದ್ದಾರೆ.

ನನ್ನ ತಂದೆ, ನಾನು, ನಮ್ಮ ಕುಟುಂಬ ಎರಡು ದಶಕಗಳ ಕಾಲ ತನು, ಮನ, ಧನದಿಂದ ಪ್ರತಿಷ್ಠಾನದ ಏಳಿಗೆಗೆ ದುಡಿದಿದ್ದೇವೆ. ಕಾರಣ, ಪ್ರತಿಷ್ಠಾನದ ಬಗ್ಗೆ ಮಾತನಾಡುವ ಹಕ್ಕು, ಅಧಿಕಾರ ನನಗಿದೆ. ನಾನು ಆ ಆಧಾರದಲ್ಲಿಯೇ ಪ್ರತಿಷ್ಠಾನದ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದೇನೆಯೇ ಹೊರತು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷನಾಗಿ ಅಲ್ಲ ಎಂದು ತಿಳಿಸಿದ್ದಾರೆ.

ಎಲ್ಲ ಬಸವ ಪರ ಸಂಸ್ಥೆಗಳ ಉದ್ದೇಶ ಬಸವ ತತ್ವ ಪ್ರಸಾರವೇ ಆಗಿದೆ. ಯಾವ ಸಂಸ್ಥೆ ಹಾಳಾದರೂ ಅದು ಬಸವ ಭಕ್ತರಿಗೆ ಆಗುವ ದೊಡ್ಡ ನಷ್ಟ. ಈ ಕನಿಷ್ಠ ಪರಿಜ್ಞಾನವೂ ಅತಿವಾಳ ಅವರಿಗೆ ಇದ್ದಂತಿಲ್ಲ ಎಂದು ಹರಿಹಾಯ್ದಿದ್ದಾರೆ.

ಅಶೋಕ ಎಲಿ ಅವರು ನ್ಯಾಯಾಲಯದ ದಾವೆಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಗಂಗಾಂಬಿಕೆ ಅಕ್ಕ ಅವರ ಆಹ್ವಾನದ ಮೇರೆಗೆ ಪತ್ರಿಕಾಗೋಷ್ಠಿಗೆ ಹೋಗಿದ್ದೇನೆ. ಪ್ರತಿಷ್ಠಾನದ ಅಕ್ಕದ್ವಯರ ಬಗ್ಗೆ ನನಗೆ ಗೌರವ ಇದೆ. ನನ್ನ ಹೇಳಿಕೆ ಸಮಾಜ, ತತ್ವ, ಸಂಸ್ಥೆಯ ಪರವಾಗಿದೆಯೇ ಹೊರತು ಯಾರದ್ದೋ ವಿರುದ್ಧ ಅಥವಾ ಪರ ಅಲ್ಲ ಎಂದು ಹೇಳಿದ್ದಾರೆ.

ಬಸವ ಸೇವಾ ಪ್ರತಿಷ್ಠಾನದ ವಿವಾದವನ್ನು ಅಕ್ಕದ್ವಯರೇ ಬಗೆಹರಿಸಿಕೊಂಡಿದ್ದರೆ ಸಮಾಜದ ಮುಖಂಡರು ಈ ಬಗ್ಗೆ ಸಲಹೆ, ಸೂಚನೆ ನೀಡುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ಹಾಗೆ ಆಗದ ಕಾರಣ ಹಲವು ಸುತ್ತು ಸಭೆಗಳನ್ನು ನಡೆಸಿ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪಾಟೀಲ ಅವರು ಪ್ರತಿಷ್ಠಾನ ಸ್ಥಾಪನೆ ಸಂದರ್ಭದಲ್ಲಿ ಅಕ್ಕನವರೊಂದಿಗೆ ಬೀದಿ ಜಗಳ ಮಾಡಿ, ಕೋರ್ಟ್‍ನಲ್ಲಿ ದಾವೆ ಹೂಡಿದ್ದನ್ನು ಯಾರೂ ಮರೆತಿಲ್ಲ. ಈಗ ಪ್ರತಿಷ್ಠಾನದ ವಿಚಾರದಲ್ಲಿ ಸಲಹೆ ನೀಡುತ್ತಿರುವ ಅವರ ನಾಟಕ ಎಲ್ಲರಿಗೂ ಅರ್ಥವಾಗುತ್ತಿದೆ ಎಂದಿದ್ದಾರೆ.

ಜಗಳ ಹಚ್ಚುವುದು, ವಿವಾದ ಹುಟ್ಟು ಹಾಕುವುದು ಶಿವರಾಜ ಪಾಟೀಲ ಅವರ ನಿತ್ಯದ ಕೆಲಸವೇ ವಿನಃ ನನ್ನದಲ್ಲ. ನಾನು ಬಸವ ಧರ್ಮ ಪೀಠದಲ್ಲಿ ಒಡಕು ಉಂಟು ಮಾಡಿಲ್ಲ. ಜಂಗಮ ಮೂರ್ತಿಗಳಲ್ಲಿ ಜಗಳವೂ ಹಚ್ಚಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೂಡಲಸಂಗಮದೇವ ವಚನಾಂಕಿತ ಬಳಕೆ ನಿರ್ಧಾರದ ನಂತರ ಪಾಟೀಲ ಅವರು ಮಾತೆ ಗಂಗಾದೇವಿ ಅವರಿಗೆ ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ. ಇಲ್ಲಸಲ್ಲದ ಹೇಳಿಕೆ ಕೊಟ್ಟು ನನ್ನ ತೇಜೋವಧಗೂ ಪ್ರಯತ್ನಿಸುತ್ತಿದ್ದಾರೆ. ಬಸವ ಭಕ್ತರು ಇವರ ಅರ್ಥಹೀನ ಹೇಳಿಕೆಗಳಿಗೆ ಕಿವಿಗೊಡಬಾರದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT