ಬೀದರ್: ವಾರದ ಹಿಂದಷ್ಟೇ ಅತ್ಯಾಧುನಿಕ ಕ್ಯಾಥ್ಲ್ಯಾಬ್ ಅಳವಡಿಸಿಕೊಂಡಿರುವ ನಗರದ ಗುರುನಾನಕ ಆಸ್ಪತ್ರೆಯಲ್ಲಿ 7 ಜನ ಹೃದ್ರೋಗಿಗಳಿಗೆ ಯಶಸ್ವಿಯಾಗಿ ಸ್ಟಂಟ್ ಅಳವಡಿಸಲಾಗಿದೆ. ಸ್ಟಂಟ್ ಅಳವಡಿಸಿದವರ ಪೈಕಿ ಆರು ಮಂದಿಗೆ ಆಯುಷ್ಮಾನ ಭಾರತ ಯೋಜನೆಯಡಿ ಸ್ಟಂಟ್ ಅಳವಡಿಕೆ ಸೇರಿದಂತೆ ಎಲ್ಲ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗಿದೆ ಎಂದು ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಸಂಜೀವರೆಡ್ಡಿ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗಿದ್ದ ಒಟ್ಟು 25 ಜನ ಕಳೆದೊಂದು ವಾರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ 7 ಜನರಿಗೆ ಒಟ್ಟು 9 ಸ್ಟಂಟ್ ಅಳವಡಿಸಲಾಗಿದೆ. ಇದರಲ್ಲಿ 6 ಜನರು ಆಯುಷ್ಮಾನ ಭಾರತ ಯೋಜನೆಯಡಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಗುರುನಾನಕ ಆಸ್ಪತ್ರೆಯು ಹೃದ್ರೋಗಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿದೆ ಎಂದು ಹೇಳಿದರು.
ಸ್ಟಂಟ್ ಅಳವಡಿಕೆ ನಂತರ ಮರು ತಪಾಸಣೆ ನಡೆಸುವ, ಸ್ಟಂಟ್ ಸರಿಯಾದ ಸ್ಥಳದಲ್ಲಿ ಅಳವಡಿಸಿರುವುದನ್ನು ಖಾತರಿಪಡಿಸಿಕೊಳ್ಳುವ ಸ್ಟಂಟ್ ಬೂಸ್ಟ್ ಸೌಲಭ್ಯವೂ ಆಸ್ಪತ್ರೆಯಲ್ಲಿ ಇದೆ ಎಂದು ತಿಳಿಸಿದರು.
ಹೃದ್ರೋಗ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ದೂರದ ಆಸ್ಪತ್ರೆಗಳಿಗೆ ಹೋಗಬೇಕಾದ ಅಗತ್ಯ ಇಲ್ಲ. ಗುರುನಾನಕ ಆಸ್ಪತ್ರೆಯಲ್ಲಿ ಸ್ಟಂಟ್ ಅಳವಡಿಕೆ ಸೇರಿದಂತೆ ಎಲ್ಲ ಚಿಕಿತ್ಸೆಗಳನ್ನು ಕಡಿಮೆ ಶುಲ್ಕದಲ್ಲಿ ಯಶಸ್ವಿಯಾಗಿ ನೀಡಲಾಗುತ್ತಿದೆ. ಬಿಪಿಎಲ್ ಕಾರ್ಡ್ ಇರುವ ರೋಗಿಗಳಿಗೆ ಸರ್ಕಾರದ ನಿಯಮಾನುಸಾರ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತಿದೆ ಎಂದರು.
ವಾರದೊಳಗೇ 7 ಜನ ರೋಗಿಗಳಿಗೆ ಯಶಸ್ವಿಯಾಗಿ ಸ್ಟಂಟ್ ಅಳವಡಿಸಿದ ಪ್ರಯುಕ್ತ ಗುರುನಾನಕ ಝೀರಾ ಫೌಂಡೇಶನ್ ಅಧ್ಯಕ್ಷ ಬಲಬೀರಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ. ರೋಗಿಗಳಿಗೆ ಸಾಧ್ಯವಿರುವ ಎಲ್ಲ ಅನುಕೂಲ ಮಾಡಿಕೊಡುವ ಭರವಸೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಕಾರಣಾಂತರದಿಂದ ನಿಲ್ಲಿಸಲಾಗಿದ್ದ ಉಚಿತ ಊಟದ ವ್ಯವಸ್ಥೆ ಈಗ ಪುನಃ ಶುರುವಾಗಲಿದೆ ಎಂದು ತಿಳಿಸಿದರು.
ಬಿಪಿಎಲ್ ಕಾರ್ಡ್ ಇದ್ದವರು ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ಉಚಿತವಾಗಿ ಪಡೆಯಬಹುದು. ಆಸ್ಪತ್ರೆಯಲ್ಲಿ ಆ್ಯಂಜಿಯೋಗ್ರಾಮ್ಗೆ ಕಡಿಮೆ ಶುಲ್ಕ ಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ತಪಾಸಣೆಯನ್ನೂ ಉಚಿತವಾಗಿ ಮಾಡುವ ಆಲೋಚನೆ ನಡೆಯುತ್ತಿದೆ ಎಂದು ಹೇಳಿದರು.
ಡಾ. ನೀಲೇಶ ದೇಶಮುಖ್, ಡಾ. ಪ್ರಿಯಂಕಾ ಪಾಟೀಲ ಸುದ್ದಿಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.