ತಾಲ್ಲೂಕಿನ ಬಹುತೇಕ ಕೆರೆ, ಕಟ್ಟೆಗಳು ಹಾಗೂ ಇತರೆ ನೀರಿನ ಮೂಲಗಳೆಲ್ಲ ಬತ್ತಿ ಹೋಗಿವೆ. ಹೀಗಾಗಿ ಅಲ್ಲಲ್ಲಿ ಕೆರೆ, ಹಳ್ಳ, ಕೊಳ್ಳಗಳ ಬಳಿ ವಾಸವಿರುವ ಪಕ್ಷಿಗಳು ವಲಸೆ ಹೋಗುತ್ತಿವೆ. ಆದರೆ ತಾಲ್ಲೂಕಿನ ಗಡಿ ಗ್ರಾಮ ನಾಗನಪಲ್ಲಿ ಕೆರೆ ಬಳಿ ಗೂಡು ಕಟ್ಟಿದ ಹಕ್ಕಿಗಳು ವಲಸೆ ಹೋಗಲು ಆಗದೆ ಪರದಾಡುತ್ತಿವೆ. ಇದನ್ನು ಗಮನಿಸಿದ ತಾಲ್ಲೂಕಿನ ಪರಿಸರ ಪ್ರೇಮಿ ರಿಯಾಜ್ ಪಾಶಾ ಕೊಳ್ಳೂರ್ ಅವುಗಳ ರಕ್ಷಣೆಗೆ ಮುಂದಾಗಿದ್ದಾರೆ. ಪಕ್ಷಿಗಳು ಗೂಡು ಕಟ್ಟಿದ ಮರಗಳಿಗೆ ಬಾಟಲ್ ಕಟ್ಟಿ ಅವುಗಳಿಗೆ ನೀರು ಕುಡಿಸುತ್ತಿದ್ದಾರೆ.