ಔರಾದ್: ತಾಲ್ಲೂಕಿನ ಮಸ್ಕಲ್ ಹಾಗೂ ಚಟ್ನಾಳ ತಾಂಡಾದಲ್ಲಿ ಉದ್ಭವಿಸಿದ ಕುಡಿಯುವ ನೀರಿನ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ.
ಈ ಎರಡು ತಾಂಡಾ ಜನ ಕಳೆದ ಎರಡು ತಿಂಗಳಿನಿಂದ ಕುಡಿಯುವ ನೀರಿಗಾಗಿ ಅಹೋರಾತ್ರಿ ಪರದಾಡುತ್ತಿದ್ದರು.
ಈ ಕುರಿತಂತೆ ‘ಪ್ರಜಾವಾಣಿ’ ಏಪ್ರಿಲ್ 5ರಂದು ‘ರಣ ಬಿಸಿಲಿನಲ್ಲಿ ನೀರಿಗೆ ಅಲೆದಾಟ’ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು. ವರದಿ ಬಂದ ದಿನವೇ ರಾತ್ರಿ ತಾಂಡಾದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯಲಾಗಿದೆ. 3 ಇಂಚು ನೀರು ಬಂದಿದ್ದು, ಖುಷಿ ತಂದಿದೆ ಎಂದು ಸಂತಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ ತಿಳಿಸಿದ್ದಾರೆ.
‘ಈ ತಾಂಡಾದಲ್ಲಿನ ಹಳೆ ಕೊಳವೆ ಬಾವಿಗೆ ಮರುಪೂರಣ ಮಾಡಿದರೂ ನೀರು ಬಂದಿಲ್ಲ. ಸುತ್ತಲೂ ಎಲ್ಲಿಯೂ ನೀರಿನ ಮೂಲ ಇಲ್ಲ. ಹೀಗಾಗಿ ಇವರಿಗೆ ನೀರು ಪೂರೈಸುವುದು ನಮಗೂ ಚಿಂತೆಯಾಗಿತ್ತು. ಈಗ ಹೊಸ ಕೊಳವೆ ಬಾವಿಗೆ ನೀರು ಬಂದಿದ್ದು ನಾವು ನಿರಾಳರಾದೆವು’ ಎಂದು ತಾಲ್ಲೂಕು ಪಂಚಾಯಿತಿ ಕುಡಿಯುವ ನೀರು ಸರಬರಾಜು ವಿಭಾಗದ ಎಂಜಿನಿಯರ್ ಸುಭಾಷ ತಿಳಿಸಿದ್ದಾರೆ.
ಲಾಧಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಸ್ತಾಪುರ ಗ್ರಾಮಸ್ಥರು ನೀರಿನ ಸಮಸ್ಯೆ ಪರಿಹರಿಸುವ ಕುರಿತು ಪತ್ರಿಕೆಗೆ ಮಾಹಿತಿ ನೀಡಿದರು. ಈ ಕುರಿತು ಬಂದ ವರದಿಗೆ ತಕ್ಷಣ ಸ್ಪಂದಿಸಿದ ಪಂಚಾಯಿತಿ ಸಿಬ್ಬಂದಿ ಹೊದಾಗಿ ಪೈಪ್ಲೈನ್ ಮಾಡಿ ನೀರು ಪೂರೈಸಿದ್ದಾರೆ ಎಂದು ಮುಸ್ತಾಪುರ ಗ್ರಾಮಸ್ಥ ಮಲ್ಹಾರಾವ್ ತಿಳಿಸಿದ್ದಾರೆ.