ಖಟಕಚಿಂಚೋಳಿ: ಸಮೀಪದ ಉಚ್ಚಾ ಗ್ರಾಮದ ಲಿಂಗ ಯೋಗಧ್ಯಾನ ಮಂದಿರದಲ್ಲಿ ಕಂಠಯ್ಯ ಸ್ವಾಮೀಜಿಯ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಯಿತು.
ತಾಲ್ಲೂಕಿನ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು,‘ಪ್ರತಿಯೊಬ್ಬರೂ ಗುರುವಿನ ಮಾರ್ಗದಲ್ಲಿ ನಡೆಯಬೇಕು. ಅಂದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ’ ಎಂದು ತಿಳಿಸಿದರು.
ಶಿಕ್ಷಕ ಮಹಾದೇವ ಸಜ್ಜನಶೆಟ್ಟಿ ಮಾತನಾಡಿ,‘ಲಿಂಗ ಯೋಗಧ್ಯಾನ ಮಂದಿರದಲ್ಲಿ ಆಡಂಬರವಿಲ್ಲದೆ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ ಸೇರಿದಂತೆ ಸಾಮಾಜಿಕ ಕಾರ್ಯಕ್ರಮಗಳು ನಿರಂತರವಾಗಿ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರಿಂದ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ’ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ಅಪರಾಜಿತೇಶ್ವರಿ ಸೂರ್ಯಕಾಂತ ಪಾಟೀಲ, ಪವನ ಜ್ಞಾನೇಶ್ವರ ನಿರಗುಡೆ, ಶರತ ಸಾವಂತ, ಚಿನ್ನಮ್ಮ ದೇವಿದಾಸ, ಪಲ್ಲವಿ ಶಾಲಿವಾನ ಹಾಗೂ ವಿಜೇತಾ ಮಹಾದೇವ ಅವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಸೋಮನಾಥ ಸಜ್ಜನ, ದಾರಾಸಿಂಗ್ ಠಾಕೂರ, ರವಿ ಮಹಾಗಾಂವೆ ಹಾಗೂ ಮಹಾದೇವ ಸಜ್ಜನ ಇದ್ದರು. ಭೀಮಾಶಂಕರ ಪಾಟೀಲ ನಿರೂಪಿಸಿದರು.