ಬೀದರ್: ‘ಕ್ಷಯರೋಗಕ್ಕೆ ಯಾರೂ ಭಯ, ಆತಂಕ ಪಡಬೇಕಿಲ್ಲ’ ಎಂದು ಎಫ್ಪಿಎಐ ಸಂಸ್ಥೆ ಅಧ್ಯಕ್ಷ ಡಾ. ನಾಗೇಶ ಪಾಟೀಲ ತಿಳಿಸಿದರು.
ಎಫ್ಪಿಎಐನಿಂದ ನಗರದ ಸಿದ್ದಾರ್ಥ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯ ರೋಗದ ಅರಿವು/ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವಜನರೇ ನಮ್ಮ ಭಾರತದ ಶಕ್ತಿ. ಯುವಜನರು ಶಿಕ್ಷಣದ ಜೊತೆಗೆ ಆರೋಗ್ಯದ ಕುರಿತು ಮುತುವರ್ಜಿ ವಹಿಸಬೇಕು. ಕ್ಷಯರೋಗದ ಬಗ್ಗೆ ತಿಳಿವಳಿಕೆ ಅಗತ್ಯ. ಕ್ಷಯರೋಗ ಮುಕ್ತ ಭಾರತಕ್ಕಾಗಿ ಕೆಲಸ ಮಾಡುತ್ತಿದ್ದು, ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಎಫ್ಪಿಎಐ ಸಂಸ್ಥೆ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಮಾತನಾಡಿ, ಕ್ಷಯರೋಗವು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದೆ. ಇದು ಹೆಚ್ಚಾಗಿ ಹರಡುತ್ತಿದೆ. ಆದಕಾರಣ ಕ್ಷಯರೋಗ ಮುಕ್ತ ದೇಶವನ್ನಾಗಿ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಸಿದ್ದಾರ್ಥ ಪದವಿ ಕಾಲೇಜಿನ ಪ್ರಾಚಾರ್ಯ ಗೋಪಾಲ ಬಡಿಗೇರ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಂಡು ಆರೋಗ್ಯವಂತರಾಗಿರಬೇಕು ಎಂದು ತಿಳಿಸಿದರು.
ಕಾಲೇಜಿನ ಉಪ ಪ್ರಾಚಾರ್ಯ ಜಗದೇವಪ್ಪಾ ಚೆಕ್ಕಿ, ಪ್ರಾಧ್ಯಾಪಕರಾದ ಬಸವರಾಜ ಸ್ವಾಮಿ, ಗಿರೀಶ ಮೀಸೆ, ಎಫ್ಪಿಎಐ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ವಿಜಯಲಕ್ಷ್ಮಿ ಹುಡಗೆ ಹಾಜರಿದ್ದರು.