ಬೀದರ್: ಪ್ರಸ್ತುತ ಮಹಿಳೆಯರಿಲ್ಲದ ಕ್ಷೇತ್ರಗಳೇ ಇಲ್ಲ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಾರ್ಯದರ್ಶಿ ಡಾ. ವೀರೇಂದ್ರ ಶಾಸ್ತ್ರಿ ಹೇಳಿದರು.
ಇಲ್ಲಿಯ ಅರುಣೋದಯ ಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಭಾರತ ಜ್ಞಾನ ವಿಜ್ಞಾನ ಸಮಿತಿ, ನ್ಯೂ ಮದರ್ ತೆರೆಸಾ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಖುಷಿಕೇಶ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಸ್ರೊ, ನಾಸಾ, ಚಂದ್ರಯಾನ-2, ಮಂಗಳಯಾನ, ಕೋವಿಡ್ ಲಸಿಕೆ ತಯಾರಿಕೆಯಲ್ಲೂ ಮಹಿಳಾ ವಿಜ್ಞಾನಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.
ಮಕ್ಕಳು ದೇಶದ ಅಮೂಲ್ಯ ಸಂಪತ್ತಾಗಿದ್ದಾರೆ. ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದು ಹೇಳಿದರು.
ಸಮಗ್ರ ಶಿಕ್ಷಣ ಕರ್ನಾಟಕದ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಗುಂಡಪ್ಪ ಹುಡಗೆ, ಕಾರ್ಯಕ್ರಮದ ಸಂಯೋಜಕ ಸಂಜೀವಕುಮಾರ ಸ್ವಾಮಿ ಮಾತನಾಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿಣಿ ಸದಸ್ಯ ಪ್ರಕಾಶ ಲಕ್ಕಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಿಜ್ಞಾನ ಪರಿಷತ್ ಆಡಳಿತ ಮಂಡಳಿ ಸದಸ್ಯ ಬಾಬುರಾವ್ ದಾನಿ, ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುಂಗ ಬೆಲ್ದಾರ್, ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ದೇವಿಪ್ರಸಾದ ಕಲಾಲ್, ಋಷಿಕೇಶ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಜೇಂದ್ರ ಮಣಿಗೆರೆ, ಬಸವರಾಜ ಮುಗಟಾಪುರೆ, ಮಂಜುನಾಥ ಬೆಳಕಿರೆ ಉಪಸ್ಥಿತರಿದ್ದರು.
ಪ್ರಬಂಧ, ಭಾಷಣ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದ ನಿಕಿತಾ ದತ್ತಾತ್ರಿ, ಸುಧಾರಾಣಿ ನಾಗಣ್ಣ, ಕೆ. ರಶ್ಮಿ ರವೀಂದ್ರ, ಶಿವಾನಿ ಸುನೀಲ್ ಗೌಳಿ, ನಿಕಿತಾ ಬಾಬುರಾವ್, ಭಾಗ್ಯಶ್ರೀ ತುಕಾರಾಮ, ಸ್ವಾತಿ ವೈಜಿನಾಥ, ಭವಾನಿ ಉಮೇಶ, ರೇಣುಕಾ, ಶಾರದಾ, ಆಶ್ರಯ ಕುಲಕರ್ಣಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಂತರರಾಷ್ಟ್ರೀಯ ಮಹಿಳಾ ಹಾಗೂ ಬಾಲಕಿಯರ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು.