ಚಿಕ್ಕಪೇಟೆ(ಜನವಾಡ): ಸಮಾಜದಲ್ಲಿ ಹಿಂಸಾ ಪ್ರವೃತ್ತಿ ಬೆಳೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ರಾಮ ಟಿ.ಪಿ. ಹೇಳಿದರು.
ಡಾನ್ ಬೊಸ್ಕೊ ಸ್ವಯಂ ಸೇವಾ ಸಂಸ್ಥೆ, ಬೆಂಗಳೂರಿನ ಬ್ರೇಡ್ಸ್ ಸಂಸ್ಥೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಬೀದರ್ ತಾಲ್ಲೂಕಿನ ಚಿಕ್ಕಪೇಟೆಯ ಡಾನ್ ಬೊಸ್ಕೊ ಸಂಸ್ಥೆಯಲ್ಲಿ ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯೆಯರು ಹಾಗೂ ಕಿಶೋರಿಯರಿಗೆ ಆಯೋಜಿಸಿದ್ದ ನಾಯಕತ್ವ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವರದಕ್ಷಿಣೆಗಾಗಿ ಮಹಿಳೆಯರ ಕೊಲೆ, ಸಾಮೂಹಿಕ ಅತ್ಯಾಚಾರ, ಆ್ಯಸಿಡ್ ದಾಳಿ, ಹೆಣ್ಣು ಭ್ರೂಣ ಹತ್ಯೆಯಂತಹ ಅಮಾನವೀಯ ಪ್ರಕರಣಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆಯರು ಕಾನೂನಿನ ರಕ್ಷಣೆ ಪಡೆಯಬೇಕು. ವಿವಿಧ ಅವಕಾಶಗಳನ್ನು ಬಳಸಿಕೊಂಡು ಪ್ರಗತಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ದೀರ್ಘಾಯುಷ್ಯ, ತಾಳ್ಮೆ ಹಾಗೂ ಕುಟುಂಬ ನಿರ್ವಹಣೆ ಸಾಮರ್ಥ್ಯ ಮಹಿಳೆಗೆ ನೈಸರ್ಗಿಕವಾಗಿ ಬಂದಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಬೀದರ್ನ ಮಾರ್ಕೇಟ್ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸಂಗೀತಾ ಸಿಂಧೆ ನುಡಿದರು.
ವೆಲ್ಮೆಗ್ನಾ ಗುಡ್ ನ್ಯೂಸ್ ಸಂಸ್ಥೆ ನಿರ್ದೇಶಕಿ ಡಾ. ಸಿಬಿಲ್ ಸಾಲಿನ್ಸ್ ಮಾತನಾಡಿ, ಮಹಿಳೆಯರು ಶೈಕ್ಷಣಿಕವಾಗಿ ಮುಂದೆ ಬರಬೇಕು. ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸರ್ಕಾರದ ವಿವಿಧ ಸೌಲಭ್ಯಗಳ ಸದ್ಬಳಕೆ ಮೂಲಕ ಆತ್ಮಸ್ಥೈರ್ಯ ಹಾಗೂ ಆತ್ಮಗೌರವದ ಬದುಕು ಸಾಗಿಸುವಂತೆ ಮಹಿಳೆಯರಿಗೆ ಪ್ರೇರಣೆ ನೀಡುವುದೇ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಡಾನ್ ಬೊಸ್ಕೊ ಸ್ವಯಂ ಸೇವಾ ಸಂಸ್ಥೆಯ ನಿರ್ದೇಶಕ ಫಾದರ್ ಜೇಮ್ಸ್ ಪೌಲ್ ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭೀಮಸೇನ್ ಚೌಹಾಣ್, ಮಹಿಳಾ ಶಕ್ತಿ ಕೇಂದ್ರದ ಶಾರದಾ ಕೆ., ಮಹಾದೇವಿ ಕಲ್ಲಪ್ಪ ಉಪಸ್ಥಿತರಿದ್ದರು. ನಳಿನಿ ತಾರಾ ನಿರೂಪಿಸಿದರು. ಸಂತೋಷ ವಂದಿಸಿದರು. ಮಹಿಳಾ ಸ್ವಸಹಾಯ ಗುಂಪುಗಳ 100ಕ್ಕೂ ಹೆಚ್ಚು ಸದಸ್ಯೆಯರು ಪಾಲ್ಗೊಂಡಿದ್ದರು.
ಸಾಮೂಹಿಕ ಕ್ರಿಯೆ ಮತ್ತು ಸಂಕೀರ್ಣ ವ್ಯವಸ್ಥೆ ಮೂಲಕ ಮಹಿಳಾ ಸಬಲೀಕರಣ ಯೋಜನೆಯಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.