ಅಂತರಂಗ ಕೃಷಿ ಹೇಗೆ ಮಾಡಬೇಕು ಎಂಬುದನ್ನು ಶರಣರು, ಸಂತರು, ಮಹಾನುಭಾವರು ತಿಳಿಸಿಕೊಟ್ಟಿದ್ದಾರೆ. ಹೃದಯವೇ ಹೊಲ, ಈ ಹೊಲದಲ್ಲಿ ಅಷ್ಟಮದ, ಷಡ್ವಿಕಾರಗಳ ಕಸ ಬೀಳುತ್ತದೆ. ಅದನ್ನು ಮೊದಲು ಸ್ವಚ್ಛ ಮಾಡಬೇಕು. ಅಂತರೇಂದ್ರಿಯ ಬಾಹ್ಯೇಂದ್ರಿಯ ನಿಗ್ರಹಿಸಬೇಕು. ಅದನ್ನು ನಿಗ್ರಹಿಸಿದರೆ ನಿರ್ಮಲವಾದ ಮನಸ್ಸು ಸಿದ್ಧವಾಗುತ್ತದೆ. ನಾನು-ನನ್ನದು ಎಂಬ ಕರಿಕೆಯನ್ನು ಬೇರು ಸಮೇತ ಕಿತ್ತು ಹಾಕಬೇಕು. ಸಮತೆ ಎಂಬ ಗೊಬ್ಬರ ಚೆಲ್ಲಬೇಕು. ಸದ್ಗುರು ಬಂದು ಸದ್ಗುಣಗಳ ಬೀಜಗಳನ್ನು ಬಿತ್ತುತ್ತಾನೆ. ಉತ್ತಮ ಸಂಸ್ಕಾರವೆಂಬ ಮಳೆ ಬರುತ್ತದೆ. ಆಗಾಗ ಬರುವ ದುರಿತ ದುರ್ಗುಣಗಳ ಕಳೆಯನ್ನು ತೆಗೆದಾಗ ಅರಿವು ಎನ್ನುವ ಬೆಳೆ ಬರುತ್ತದೆ. ಸಂತೃಪ್ತಿ ಪರಮಾನಂದ ಧಾನ್ಯಗಳನ್ನು ಬೆಳೆದು ಶಿವಜ್ಞಾನದ ಆನಂದವನ್ನು ಮನದಣಿಯುವಂತೆ ಅನುಭವಿಸುತ್ತಾನೆ. ಅದಕ್ಕಾಗಿ ಬಾಹ್ಯ ಕೃಷಿ ಜೊತೆ ಅಂತರಂಗ ಕೃಷಿ ಕಡೆಯೂ ಹೆಚ್ಚು ಮಹತ್ವ ಕೊಡುವುದು ಕಾಲದ ಅಗತ್ಯತೆ ಇದೆ.