ಬಸವಕಲ್ಯಾಣ:`75 ವರ್ಷಗಳಲ್ಲಿ ನಡೆದ ದೇಶದ ಸಮಗ್ರ ಪ್ರಗತಿಯಲ್ಲಿ ಸಂವಿಧಾನದ ಪಾತ್ರ ಹಿರಿದಾಗಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ತಾಲ್ಲೂಕಿನ ಬಟಗೇರಾದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಸಂವಿಧಾನದಲ್ಲಿ ದೋಷ ಇಲ್ಲ. ಆದರೂ ಕೆಲವರಿಗೆ ಅದು ಕೆಟ್ಟದಾಗಿ ಕಾಣುತ್ತಿದೆ. ಬಾಬಾಸಾಹೇಬ್ ಅವರು ಎಲ್ಲ ಸಮುದಾಯಗಳು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಮನಾಗಿ ಬೆಳೆಯಲಿ ಎಂಬ ಸದುದ್ದೇಶದಿಂದ ಸಂವಿಧಾನ ನೀಡಿದ್ದಾರೆ. ಸಂಘಟನೆಗಳ ಧ್ಯೇಯ ಸಹ ಬಡವರಿಗೆ, ದಲಿತರಿಗೆ ನ್ಯಾಯ ದೊರಕಿಸುವುದಾಗಬೇಕು' ಎಂದರು
’ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಸವಕಲ್ಯಾಣದಲ್ಲಿ ಮಾರ್ಚ್ 7 ರಂದು ಸನ್ಮಾನಿಸಲಾಗುತ್ತದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹700 ಕೋಟಿ ಅನುದಾನ ಜಿಲ್ಲೆಗೆ ದೊರಕಲಿದೆ’ ಎಂದರು.
ದಲಿತ ಹೋರಾಟಗಾರ ತಾತೇರಾವ್ ಕಾಂಬಳೆ ಮಾತನಾಡಿ, `ಸಂವಿಧಾನವನ್ನು ಕೆಲ ಪಕ್ಷಗಳವರು ರಾಜಕೀಯ ವಿಷಯವನ್ನಾಗಿ ಪರಿವರ್ತಿಸಿದ್ದು ಅದರ ಬದಲಾವಣೆಯ ಹುನ್ನಾರ ನಡೆಯುತ್ತಿದೆ. ಆದರೆ, ಅಂಥ ತಾಕತ್ತು ಯಾರಲ್ಲೂ ಇಲ್ಲ. ರಾಷ್ಟ್ರಧ್ವಜದಲ್ಲಿನ ಅಶೋಕ ಚಕ್ರ ಒಳಗೊಂಡು ಕೆಲ ರಾಷ್ಟ್ರೀಯ ಚಿಹ್ನೆಗಳು ಬೌದ್ಧ ಧರ್ಮದ್ದಾಗಿವೆ. ಹೀಗಾಗಿ ಈಗ ಇರುವುದು ಭೀಮರಾಜ್ಯ ಎಂದರೂ ತಪ್ಪಾಗಲಾರದು' ಎಂದರು.
ಪ್ರಾಂಶುಪಾಲ ಜೈಶೇನಪ್ರಸಾದ, ಅಂಬಾದಾಸ ಗಾಯಕವಾಡ, ಪರಮೇಶ್ವರ ಢೋಲೆ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರಾದ ಪ್ರೇಮಸಾಗರ ದಾಂಡೇಕರ್, ನಾಗನಾಥ ವಾಡೇಕರ್, ತಾತೇರಾವ್ ಕಾಂಬಳೆ, ಎಂ.ಜಿ.ಮುಳೆ, ದಿಲೀಪ ಶಿಂಧೆ, ಮಲ್ಲಿಕಾರ್ಜುನ ಮಹೇಂದ್ರಕರ್, ಶರಣಪ್ಪ ಗಾಯಕವಾಡ, ಬಲಭೀಮ ಕಾಂಬಳೆ, ಲಕ್ಷ್ಮಣರಾವ್ ಗುಪ್ತಾ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ನೀಡಲಾಯಿತು.
ಭಂತೆ ಭದಂತ ಸುಮಂಗಲ, ಭಂತೆ ಭದಂತ ಧಮ್ಮಸಾರ, ಶಾಸಕ ಶರಣು ಸಲಗರ, ಮುಖಂಡರಾದ ವಿಜಯಸಿಂಗ್, ಮಾಲಾ ನಾರಾಯಣರಾವ್, ಶಿವರಾಜ ನರಶೆಟ್ಟಿ, ಬಾಬು ಹೊನ್ನಾನಾಯ್ಕ, ನೀಲಕಂಠ ರಾಠೋಡ, ರಾಜಕುಮಾರ ಶಿರಗಾಪುರ, ಯುವರಾಜ ಭೆಂಡೆ, ಸಿಕಂದರ ಶಿಂಧೆ, ಮಹಾದೇವ ಗಾಯಕವಾಡ, ಗೌತಮ ಸಂಗೋಳಗೆ, ನಾಗೇಂದ್ರ ಢೋಲೆ, ಸಂಜೀವಕುಮಾರ ಗಾಯಕವಾಡ, ದತ್ತಾತ್ರಿ ಸೂರ್ಯವಂಶಿ, ಅನಿಲ ಸಿಂಗೆ, ಭಾಸ್ಕರ ಸಂಗೋಳಗಿ, ಬಾಬುರಾವ್ ಕಾಟೆ, ಸಂದೀಪ ಢೋಲೆ, ಬಸವರಾಜ ಗಾಯಕವಾಡ, ಗಣೇಶ ಢೋಲೆ, ಮಿಲಿಂದ ಗಾಯಕವಾಡ, ಶಿವಶರಣಪ್ಪ ಢೋಲೆ ಉಪಸ್ಥಿತರಿದ್ದರು. ಭೀಮೇಶ ಭಾರತಿ ನಾಗಪುರ ಮತ್ತು ರಾಹುಲ್ ತೂತಾರೆ ಅವರಿಂದ ಭೀಮಗೀತೆಗಳ ಗಾಯನ ನಡೆಯಿತು.
ಮೀಸಲಾತಿಯ ಲಾಭಕ್ಕಾಗಿ ದಲಿತರಲ್ಲಿ ಅನೇಕರು ಬೌದ್ಧ ಧರ್ಮ ಸ್ವೀಕರಿಸದ ಕಾರಣ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಮುಖ ಆಶಯ ಈಡೇರುತ್ತಿಲ್ಲ.-ತಾತೇರಾವ್ ಕಾಂಬಳೆ ದಲಿತ ಹೋರಾಟಗಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.