ಹುಮನಾಬಾದ್: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಭೇಟಿ ನೀಡಿ ಕೋವಿಡ್ ಸೋಂಕಿತರ ಮಾಹಿತಿ ಪಡೆದುಕೊಂಡರು.
‘ಇಲಿಯ ರೋಗಿಗಳಿಗೆ ಬೀದರ್ ಅಥವಾ ಕಲಬುರ್ಗಿಗೆ ಕಳಿಸಬಾರದು. ಅವರಿಗೆ ಇಲ್ಲಿಯೇ ಸೂಕ್ತವಾದ ಚಿಕಿತ್ಸೆ ನೀಡಬೇಕು’ ಎಂದು ಸೂಚಿಸಿದರು.
‘ರಾಜರಾಜೇಶ್ವರಿ ಆಯುರ್ವೇದ ಕಾಲೇಜಿನಲ್ಲಿ ಕೋವಿಡ್ ಸೋಂಕಿತರಿಗಾಗಿ 50 ಹಾಸಿಗೆಗಳ ಆರೈಕೆ ಕೇಂದ್ರ ತೆರೆಯಲಾಗಿದ್ದು, ಚಿಕಿತ್ಸೆ ಹಾಗೂ ಊಟದ ವ್ಯವಸ್ಥೆ ಉಚಿತವಾಗಿ ಇರಲಿದೆ’ ಎಂದು ತಿಳಿಸಿದರು.
‘ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ವೈಯಕ್ತಿಕ ಅಂತರವನ್ನು ಕಾಪಾಡಿಕೊಂಡು ಸುರಕ್ಷಿತವಾಗಿ ಇರಬೇಕು’ ಎಂದು ಹೇಳಿದರು.
‘ಆಸ್ಪತ್ರೆಯಲ್ಲಿ ಈಗಾಗಲೇ ಕೋವಿಡ್ ಸೋಂಕಿತರಿಗೆ ಪ್ರತ್ಯೇಕವಾಗಿ 50 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಮನೆಯಲ್ಲಿ 65 ಸೋಂಕಿತರು ಹಾಗೂ ಸದ್ಯ ಆಸ್ಪತ್ರೆಯಲ್ಲಿ 32 ಜನ ಇದ್ದು, ಅವರಿಗೆ ಸೂಕ್ತ ಚಿಕ್ಸಿತೆ ನೀಡಲಾಗುತ್ತಿದೆ’ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ನಾಗನಾಥ ಹೂಲಸೂರೆ ಮಾಹಿತಿ ನೀಡಿದರು.
ಜಿಲ್ಲಾ ಸಹಕಾರಿ ಸದಸ್ಯ ಲಕ್ಷ್ಮಣರಾವ ಬುಳ್ಳಾ, ಟಿಎಚ್ಒ ಶಿವಕುಮಾರ ಸಿದ್ದೇಶ್ವರ, ಡಾ.ದಿಲೀಪ ಇದ್ದರು.