ಬೀದರ್: ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಬಸವಗಿರಿಯಲ್ಲಿ ಮೂರು ದಿನಗಳ ವರೆಗೆ ನಡೆದ ವಚನ ವಿಜಯೋತ್ಸವ ಶನಿವಾರ ಸಮಾರೋಪಗೊಂಡಿತು.
ಬೆಳಿಗ್ಗೆ 8.30ಕ್ಕೆ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಗಂಗಾಂಬಿಕೆ ಧ್ವಜಾರೋಹಣ ನೆರವೇರಿಸಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ನಂತರ ಬಸವಗಿರಿಯ ಭಕ್ತಿಭವನದ ಆವರಣದಿಂದ ಪರುಶ ಕಟ್ಟೆಯ ವರೆಗೆ ವಚನ ಗ್ರಂಥ ಮೆರವಣಿಗೆ ನಡೆಯಿತು.
ಶರಣ, ಶರಣೆಯರು ವಚನಗ್ರಂಥಗಳನ್ನು ತಲೆ ಮೇಲೆ ಇಟ್ಟುಕೊಂಡು ಜಯಘೋಷ ಮೊಳಗಿಸುತ್ತ, ‘ಓಂ ಗುರುಬಸವ’ ಎಂದು ಪಠಿಸುತ್ತ ಸರತಿ ಸಾಲಿನಲ್ಲಿ ಬಂದರು.
ಮೆರವಣಿಗೆಯಲ್ಲಿ ಇದ್ದವರು ವಚನ ವಿಜಯೋತ್ಸವ ಎಂದು ಬರೆದಿದ್ದ ಟೊಪ್ಪಿಗೆ ಧರಿಸಿ, ಕೊರಳಲ್ಲಿ ಕೇಸರಿ ಶಲ್ಯ ಧರಿಸಿ ತಾಳಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು. ಮಹಿಳೆಯರು ಶ್ವೇತ ವರ್ಣದ ಸೀರೆಗಳನ್ನು ತೊಟ್ಟಿದ್ದರು.
ಮೆರವಣಿಗೆಯಲ್ಲಿ ಇದ್ದವರು ಪರುಶಕಟ್ಟೆಯ ಮೇಲೆ ವಚನ ಗ್ರಂಥಗಳನ್ನು ಇಟ್ಟು ಭಕ್ತಿಯಿಂದ ನಮಿಸಿದರು. ವಚನಗಳನ್ನು ಪಠಿಸಿದರು. ಕೊನೆಯಲ್ಲಿ ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ ನೆರವೇರಿಸಲಾಯಿತು.