ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜ್ಜರಿ, ಬೀನ್ಸ್‌ ಬೆಲೆ ಏರಿಕೆ

ಮಾರುಕಟ್ಟೆಯಲ್ಲಿ ಹಿರಿತನ ಕಳೆದುಕೊಂಡ ಹಿರೇಕಾಯಿ
Last Updated 2 ಆಗಸ್ಟ್ 2019, 14:11 IST
ಅಕ್ಷರ ಗಾತ್ರ

ಬೀದರ್‌: ರಾಜ್ಯದಲ್ಲಿ ಅಲ್ಲಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯಲ್ಲಿ ಏರಿಳಿತವಾಗಿದೆ. ಗ್ರಾಹಕರು ಹೆಚ್ಚು ಇಷ್ಟಪಡುವ ತರಕಾರಿ ಬೆಲೆ ಏರಿದರೆ, ಸಹಜವಾಗಿ ಮಾರಾಟವಾಗುವ ತರಕಾರಿ ಬೆಲೆ ಸ್ಥಿರವಾಗಿದೆ. ಕೆಲ ತರಕಾರಿ ಬೆಲೆಯಲ್ಲಿ ಮಾತ್ರ ಇಳಿಕೆ ಕಂಡು ಬಂದಿದೆ.

ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹ 13,000 ಇದೆ. ಕಳೆದ ಮೂರು ವಾರಗಳಿಂದ ಬೆಳ್ಳುಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಮಳೆಗಾಲ ಪೂರ್ಣಗೊಳ್ಳುವ ವರೆಗೂ ಬೆಲೆ ಇಳಿಕೆಯಾಗುವ ಲಕ್ಷಣ ಕಂಡು ಬರುತ್ತಿಲ್ಲ. ಜಿಲ್ಲೆಯ ಜನರ ಅಚ್ಚುಮೆಚ್ಚಿನ ಬದನೆಕಾಯಿ, ಎಲೆಕೋಸು, ತೊಂಡೆಕಾಯಿ ಹಾಗೂ ಕರಿಬೇವು ಬೆಲೆ ಸ್ಥಿರವಾಗಿದೆ.

ಹಸಿಮೆಣಸಿನಕಾಯಿ, ಗಜ್ಜರಿ, ಬೀನ್ಸ್‌ ಹಾಗೂ ಬಿಟ್‌ರೂಟ್‌ ಬೆಲೆ ಕ್ವಿಂಟಲ್‌ಗೆ ₹ 2 ಸಾವಿರ ಏರಿಕೆಯಾಗಿದೆ. ಹೂಕೋಸು, ಮೆಂತೆ ಹಾಗೂ ಸಬ್ಬಸಗಿ ಸೊಪ್ಪು ₹ 1 ಸಾವಿರ ಹಾಗೂ ಈರುಳ್ಳಿ ಬೆಲೆ ₹ 500 ಹೆಚ್ಚಳವಾಗಿದೆ. ಹಿರೇಕಾಯಿ, ಬೆಂಡೆಕಾಯಿ, ಟೊಮೆಟೊ, ಕೊತಂಬರಿ ಹಾಗೂ ಪಾಲಕ್‌ ಬೆಲೆಯಲ್ಲಿ ಒಂದು ಸಾವಿರ ರೂಪಾಯಿ ಇಳಿಕೆಯಾಗಿದೆ.

ಬೆಂಗಳೂರು ಸಮೀಪದ ಅರಸಿಕೆರೆಯಿಂದ ಟೊಮೆಟೊ, ಬೆಳಗಾವಿಯಿಂದ ಮೆಣಸಿನಕಾಯಿ, ಹೈದರಾಬಾದ್‌ನಿಂದ ಬೀನ್ಸ್, ತೊಂಡೆಕಾಯಿ, ಗಜ್ಜರಿ, ಬಿಟ್‌ರೂಟ್‌, ಸೋಲಾಪುರದಿಂದ ಈರುಳ್ಳಿ, ಆಲೂಗಡ್ಡೆ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನಲ್ಲಿ ಬೆಳೆದ ಹೂಕೋಸು, ಮೆಂತೆ, ಕರಿಬೇವು, ಪಾಲಕ್‌, ಬೆಂಡೆಕಾಯಿ, ಹಿರೇಕಾಯಿ ಬೀದರ್‌ ಮಾರುಕಟ್ಟೆಗೆ ಬಂದಿದೆ.

ಬೆಳಗಾವಿಯಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ತರಕಾರಿಗೆ ಹಾನಿಯಾಗುತ್ತಿದೆ. ಹೀಗಾಗಿ ಅಲ್ಲಿನ ಮಾರುಕಟ್ಟೆಗೂ ಮೆಣಸಿನಕಾಯಿ ಆವಕ ಕಡಿಮೆ ಆಗುತ್ತಿವೆ. ಬೇಡಿಕೆ ಹೆಚ್ಚಳವಾಗಿರುವ ಕಾರಣ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 7 ಸಾವಿರಕ್ಕೆ ಏರಿದೆ. ಅಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯು ಈರುಳ್ಳಿ ಹಾಗೂ ಆಲೂಗಡ್ಡೆ ಬೆಳೆಯ ಮೇಲೂ ಪರಿಣಾಮ ಬೀರಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ತರಕಾರಿ ಸಗಟು ವ್ಯಾಪಾರಿ ಶಿವಕುಮಾರ ಹೂಗೇರಿ.

‘ಭಾನುವಾರ ಪಂಚಮಿ ಹಬ್ಬಕ್ಕೆ ದೇವರಿಗೆ ಹೋಳಿಗೆ, ಬದನೆಕಾಯಿ ಪಲ್ಯ ನೈವೇದ್ಯ ಸಮರ್ಪಿಸಲಿದ್ದಾರೆ. ಬದನೆಕಾಯಿ ಬೆಲೆ ಸ್ಥಿರವಾಗಿರುವುದು ಗ್ರಾಹಕರಿಗೆ ಸಂತಸ ತಂದಿದೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT