ಬೀದರ್: ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಯೋಜನೆಯಡಿ ಮಾಂಸ ಮತ್ತು ಮಾಂಸದಿಂದ ತಯಾರಿಸಿದ ಖಾದ್ಯ ವಸ್ತುಗಳ ಸಂಚಾರಿ ಮಾರಾಟ ವಾಹನದ ಹಸ್ತಾಂತರ ಕಾರ್ಯಕ್ರಮ ಮಂಗಳವಾರ ನಡೆಯಿತು.
ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅವರು ನಿಗಮದ ಸಹಾಯಧನ ಹಾಗೂ ಬ್ಯಾಂಕ್ ಸಾಲದೊಂದಿಗೆ ಯೋಜನೆಯ ಲಾಭ ಪಡೆದ ಔರಾದ್ ತಾಲ್ಲೂಕಿನ ಫಲಾನುಭವಿ ಯೋಗೇಶ ಗೋವಿಂದರಾವ್ ಅವರಿಗೆ ಸಂಚಾರಿ ವಾಹನ ಹಸ್ತಾಂತರಿಸಿದರು.
ವಾಹನದಲ್ಲಿ ಮಾಂಸ ಮಾರಾಟ ಹಾಗೂ ಖಾದ್ಯಗಳ ತಯಾರಿಸಲು ಮೊಬೈಲ್ ಕಿಚನ್ಗೆ ಬೇಕಾದ ಗ್ಯಾಸ್ ಒಲೆ, ಫ್ರಿಜ್, ಡೀಪ್ ಫ್ರೀಜರ್, ಓವನ್, ಮಿಕ್ಸರ್ ಹಾಗೂ ಟಿ.ವಿ. ಇತರೆ ಉಪಕರಣಗಳನ್ನು ಅಳವಡಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಪರವಾನಿಗೆ ಪಡೆದು ಜನನಿಬಿಡ ಪ್ರದೇಶಗಳಲ್ಲಿ ಮಾಂಸದಿಂದ ತಯಾರಿಸಲಾಗುವ ಖಾದ್ಯಗಳನ್ನು ಸ್ಥಳದಲ್ಲೇ ತಯಾರಿಸಿ ವ್ಯಾಪಾರ ಮಾಡಿ ಉದ್ಯೋಗ ಕಂಡುಕೊಳ್ಳಬಹುದಾಗಿದೆ.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ಸೋಮಶೇಖರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ಬಂಡೆಪ್ಪ ಕಂಟೆ, ರಮೇಶ ದೇವಕತ್ತೆ, ಸುರೇಶ ಭೋಸ್ಲೆ, ಸಚಿನ್ ರಾಠೋಡ, ಕಿರಣ ಪಾಟೀಲ, ಪ್ರಕಾಶ ಅಲ್ಮಾಜೆ ಇದ್ದರು.