ಬೀದರ್: ‘ಕಲಿಯುಗದಲ್ಲಿ ಸೃಷ್ಟಿಯ ಪರಿವರ್ತನೆಗಾಗಿ ಶಿವ ನವಶಕ್ತಿಯರನ್ನು ಸೃಷ್ಟಿಸಿದ್ದಾನೆ. ಅವರನ್ನೇ ಶಿವಶಕ್ತಿಯರು ಎನ್ನುತ್ತಾರೆ’ ಎಂದು ಪ್ರಜಾಪಿತ ಬ್ರಹ್ಮಕುಮಾರಿ ರಾಜಯೋಗ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ. ಪ್ರತಿಮಾ ಬಹೆನ್ಜಿ ಹೇಳಿದರು.
ನವರಾತ್ರಿ ಹಾಗೂ ವಿಜಯದಶಮಿ ಪ್ರಯುಕ್ತ ನಗರದ ಜನವಾಡ ರಸ್ತೆಯಲ್ಲಿ ಇರುವ ಪ್ರಜಾಪಿತ ಬ್ರಹ್ಮಕುಮಾರಿ ರಾಜಯೋಗ ಕೇಂದ್ರ ಪಾವನಧಾಮದ ಆವರಣದಲ್ಲಿ ನಡೆದ ಚೈತನ್ಯ ದೇವಿಯರ ದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶಿವಶಕ್ತಿಯರು ಅಶಾಂತಿ, ದುಃಖವನ್ನು ದೂರ ಮಾಡುತ್ತಾರೆ. ಇವರ ಕಾರ್ಯವನ್ನು ಸ್ಮರಿಸಲು ನವರಾತ್ರಿಯ ವಿಶೇಷ ವೃತ ಕೈಗೊಳ್ಳಲಾಗುತ್ತದೆ. 9 ದಿನಗಳ ಕಾಲ ದೇವಿಯರನ್ನು ಆರಾಧಿಸಲಾಗುತ್ತದೆ’ ಎಂದು ತಿಳಿಸಿದರು.
‘ಪರಮಾತ್ಮನ ಶಕ್ತಿಯಿಂದ ನಮ್ಮಲ್ಲಿರುವ ದುರ್ಗುಣಗಳ ಸಂಹಾರವಾಗಿ, ವಿಕಾರಗಳ ಮೇಲೆ ವಿಜಯ ಹೊಂದುವುದೇ ವಿಜಯದಶಮಿಯ ಆಧ್ಯಾತ್ಮಿಕ ರಹಸ್ಯವಾಗಿದೆ’ ಎಂದು ಹೇಳಿದರು.
ಲಕ್ಷ್ಮಿ, ಸರಸ್ವತಿ, ಅಂಬಾ ಭವಾನಿ, ದುರ್ಗಾ ದೇವಿ ಹಾಗೂ ಸಂತೋಷಿ ಮಾತೆಯ ಮೂರ್ತಿಗಳ ದರ್ಶನ ಏರ್ಪಡಿಸಲಾಗಿತ್ತು. ಗರ್ಭಾ ನೃತ್ಯ ಹಾಗೂ ದೇವಿಯರ ಮಹಿಮೆ ಕುರಿತ ನೃತ್ಯ ಗಮನ ಸೆಳೆಯಿತು.