ಬಸವಕಲ್ಯಾಣ: ‘ರಾಜ್ಯದ ಒಳಿತಿಗಾಗಿ ಮತದಾರರು ಜೆಡಿಎಸ್ ಗೆಲ್ಲಿಸಬೇಕು’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇಳಿಕೊಂಡರು.
ತಾಲ್ಲೂಕಿನ ಚಿಟ್ಟಾದಲ್ಲಿ ಬುಧವಾರ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ಅವರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ನಾನು ಮುಖ್ಯಮಂತ್ರಿ ಆಗಿದ್ದಾಗ, ಬಡವರ, ರೈತರ ಹಾಗೂ ಶ್ರಮಿಕವರ್ಗದವರ ಪರ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ರೈತರ ಲಕ್ಷಾಂತರ ರೂಪಾಯಿ ಸಾಲಮನ್ನಾ ಮಾಡಿದ್ದೇನೆ. ಇದೇ ತಾಲ್ಲೂಕಿನ ಉಜಳಂಬ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಸಿ ಊರಿನ ವಿಕಾಸಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ’ ಎಂದರು.
‘ಯಸ್ರಬ್ ಅಲಿ ಖಾದ್ರಿ ಅವರು ಉತ್ತಮ ಅಭ್ಯರ್ಥಿ ಆಗಿದ್ದು ಆಯ್ಕೆಯಾದರೆ ತಾಲ್ಲೂಕಿನ ಸಮಗ್ರ ವಿಕಾಸ ಕೈಗೊಳ್ಳುವ ಕನಸು ಹೊಂದಿದ್ದಾರೆ’ ಎಂದರು.
ಶಾಸಕ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ‘ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದಾರೆ. ಯಡಿಯೂರಪ್ಪ ಅಧಿಕಾರಕ್ಕೆ ಬಂದು ಏನು ಮಾಡಿದ್ದಾರೆ ಎಂಬುದರ ಬಗ್ಗೆ ಆ ಪಕ್ಷದವರಿಗೆ ಪ್ರಶ್ನಿಸಿ’ ಎಂದರು.
ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ, ತಾಲ್ಲೂಕು ಘಟಕದ ಅಧ್ಯಕ್ಷ ಶಬ್ಬೀರಪಾಶಾ ಮುಜಾವರ್, ಆಕಾಶ ಖಂಡಾಳೆ ಪಾಲ್ಗೊಂಡಿದ್ದರು.