ಬೀದರ್: ‘ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗಿ ಎಂಟು ವರ್ಷಗಳೇ ಕಳೆದಿವೆ. ಆದರೂ ಕಾಯ್ದೆ ಕುರಿತು ಕಾರ್ಯಾಗಾರ ನಡೆಯುತ್ತದೆ ಎಂದರೆ ಇನ್ನೂ ಆಡಳಿತ ವ್ಯವಸ್ಥೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ ಎಂಬುದಕ್ಕೆ ನಿದರ್ಶನ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಯ್ಯ ಹೇಳಿದರು.
ಜಿಲ್ಲಾಡಳಿತ ಹಾಗೂ ಮೈಸೂರು ಆಡಳಿತ ತರಬೇತಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ನಗರದ ರಂಗಮಂದಿರದಲ್ಲಿ ಆಯೋಜಿಸಿದ್ದ ‘ಮಾಹಿತಿ ಹಕ್ಕು ಕಾಯ್ದೆ–2005’ ಕುರಿತ ಎರಡು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕಚೇರಿಗೆ ಯಾವುದಾದರೂ ಒಂದು ಅರ್ಜಿ ಬಂದರೂ ಕಚೇರಿಯ ಅಧಿಕಾರಿಗಳು ಭಯ ಪಡುತ್ತಿದ್ದಾರೆ. ಒಂದು ವೇಳೆ ಮಾಹಿತಿ ಸರಿಯಾದ ಸಮಯಕ್ಕೆ ನೀಡದಿದ್ದಲ್ಲಿ ದಂಡ ವಿಧಿಸಲಾಗುತ್ತದೆ ಎನ್ನುವ ಭಯ ಇದಕ್ಕೆ ಕಾರಣ’ ಎಂದು ತಿಳಿಸಿದರು.
‘ಸಾರ್ವಜನಿಕರು ಕಾಯ್ದೆ ಮೂಲಕ ಮಾಹಿತಿ ಪಡೆಯಲು ಆಸಕ್ತಿ ಹೊಂದಿದ್ದಾರೆ. ಅಧಿಕಾರಿಗಳು ಕಾಯ್ದೆಯನ್ನು ಅರ್ಥ ಮಾಡಿಕೊಂಡು ಪರಿಣಾಮಕಾರಿಯಾಗಿ ಜಾರಿಗೆ ತರಲು ಒತ್ತು ನೀಡಬೇಕು. ಕಾಯ್ದೆ ಕುರಿತು ತಿಳಿಯದಿದ್ದಲ್ಲಿ ಅನುಭವಿಗಳನ್ನು ಕೇಳಿ ತಿಳಿದುಕೊಳ್ಳಬೇಕು’ ಎಂದರು.
ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯ ಬಿ.ಎಸ್.ಸ್ವಾಮಿ, ಮೈಸೂರಿನ ಜಿ.ಮಲ್ಲೇಶ್ವರಪ್ಪ, ಜಿ.ಜಿ. ಹೆಗಡೆ ಉಪಸ್ಥಿತರಿದ್ದರು.
ನಂತರ ನಡೆದ ಕಾರ್ಯಾಗಾರದಲ್ಲಿ ಕಾಯ್ದೆ ಕುರಿತ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ ರಾಜ್ಯ ನಗರಾಭಿವೃದ್ಧಿ ಸಂಸ್ಥೆಯ ಸಿ.ಅಶೋಕ, ಯಾವುದೇ ರಜೆ ಅಥವಾ ಭಾನುವಾರ ಇದ್ದರೂ, ನಾಗರಿಕರು ಅರ್ಜಿ ಸಲ್ಲಿಸಿದ ದಿನದಿಂದ 30 ದಿನಗಳ ಒಳಗೆ ತಪ್ಪದೇ ಮಾಹಿತಿ ನೀಡಬೇಕು ಎಂದರು.